ಕುಮಟಾ: ‘ಹಿಂದೆ ಪರೇಶ ಮೇಸ್ತ ಪ್ರಕರಣದಲ್ಲಿ ನನ್ನ ಮೇಲೆ ಯಾಕೆ ಪ್ರಕರಣ ದಾಖಲಾಗಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದ್ದಾರೆ. ನಾನು ಏನು ಮಾಡಿದ್ದೇನೆ ಎಂದು ನನ್ನ ಮೇಲೆ ಪ್ರಕರಣ ದಾಖಲಿಸಬೇಕಿತ್ತು? ನನ್ನ ಮೇಲೆ ಪ್ರಕರಣ ದಾಖಲಿಸದಂತೆ ಆಗ ಯಾರು ತಡೆದಿದ್ದರು?’ ಎಂದು ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದರು.
ಮಂಗಳವಾರ ಕುಮಟಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಪರೇಶ ಪ್ರಕರಣದಲ್ಲಿ ಪಶ್ಚಿಮ ವಲಯ ಐಜಿಪಿಯಾಗಿದ್ದ ಹೇಮಂತ ನಿಂಬಾಳ್ಕರ್ ಅವರ ಕಾರಿಗೆ ಬೆಂಕಿ ಹಾಕಿದಾಗಲೇ ಅವರು ಎಷ್ಟು ದುರ್ಬಲ ಅಧಿಕಾರಿ ಎನ್ನುವುದು ಸಾಬೀತಾಗಿದೆ’ ಎಂದರು.
‘ಈ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿ ಕೇವಲ 25– 3 ಸ್ಥಾನಗಳಿಗೆ ಸೀಮಿತವಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ತನ್ನ ಹೀನಾಯ ಸೋಲಿನ ಬಗ್ಗೆ ಸ್ಪಷ್ಟವಾಗಿದ್ದು, ಹತಾಶೆಯಿಂದ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದೆ. 2047 ರ ಹೊತ್ತಿಗೆ ದೇಶ ಸಾಧಿಸಬೇಕಾದ ಅಭಿವೃದ್ಧಿ ಕಾಳಜಿಗಿಂತ ಅಲ್ಪಸಂಖ್ಯಾತರನ್ನು ಓಲೈಸುತ್ತಾ ಅದು ಚೊಂಬು ಹಿಡಿದುಕೊಂಡು ಓಡಾಡುತ್ತಿದೆ. ಹಿಂದುಳಿದ ಹಾಗೂ ಪರಿಶಿಷ್ಟರ ಮೀಸಲಾತಿ ಸೌಲಭ್ಯವನ್ನು ಮುಸ್ಲಿಂ ಮತ್ತು ಕ್ರಿಶ್ಚಿಯನ್ರಿಗೆ ಕೊಡಲು ಮುಂದಾಗಿರುವ ಕ್ರಮವನ್ನು ಬಿಜೆಪಿ ತಡೆಯುತ್ತದೆ’ ಎಂದರು.
‘ಶಿವರಾಂ ಹೆಬ್ಬಾರ್ ಬಿಜೆಪಿ ಶಾಸಕರಾಗಿ ಆಯ್ಕೆಯಾದವರು. ಆದರೆ ರಾಜ್ಯಸಭೆ ಚುನಾವಣೆಯಲ್ಲಿ ಅವರು ಮತದಾನ ಮಾಡಿಲ್ಲ. ತನ್ನ ಆರಿಸಿದ ಮತದಾರರನ್ನು ಕೊಂಡುಕೊಳ್ಳಬಹುದು ಎನ್ನುವ ಅವರ ನಿಲುವಿಗೆ ಅವರ ಕ್ಷೇತ್ರ ಮತದಾರರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ ಅವರನ್ನು ಇನೊಮ್ಮೆ ಪ್ರಧಾನಿಯಾಗಿಸುವ ಮೂಲಕ ಅವರು ತಮ್ಮ ಶಕ್ತಿ ತೋರಲಿದ್ದಾರೆ’ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ‘ಪರೇಶ ಮೇಸ್ತ ಪ್ರಕರಣದಲ್ಲಿ ನನ್ನ ಮೇಲೂ ಆಗ ಪ್ರಕರಣ ದಾಖಲಾಗಿತ್ತು. ಆಗ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್ ಸರ್ಕಾರವೇ ಕಾಗೇರಿಯವರ ಮೇಲೆ ಯಾಕೆ ಕ್ರಮ ಕೈಕೊಂಡಿಲ್ಲ? ಡಾ. ಅಂಜಲಿ ನಿಂಬಾಳ್ಕರ್ ಮನ ಬಂದಂತೆ ಮಾತಾಡುವುದು ಸರಿಯಲ್ಲ. ಜೆಡಿಎಸ್–ಬಿಜೆಪಿ ನಡುವೆ ಏನೇ ಸಣ್ಣ-ಪುಟ್ಟ ಸಮಸ್ಯೆಗಳಿದ್ದರೂ ಮುಂದೆ ಸ್ವತಃ ನಾನೇ ನಿಂತು ಅದನ್ನು ಸರಿಪಡಿಸಿ ಎರಡೂ ಪಕ್ಷಗಳ ಮೈತ್ರಿ ಗಟ್ಟಿಗೊಳಿಸುವೆ’ ಎಂದರು.
ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ, ತಾಲ್ಲೂಕು ಘಟಕದ ಅಧ್ಯಕ್ಷ ಚಿದಾನಂದ ಹೆಗಡೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಹೆಗಡೆ, ಜಿ.ಜಿ. ಹೆಗಡೆ, ಗಜಾನನ ಗುನಗ, ಅಶೋಕ ಪ್ರಭು, ಜಿ.ಐ. ಹೆಗಡೆ, ಪ್ರಶಾಂತ ನಾಯ್ಕ, ವೆಂಕಟೇಶ ನಾಯಕ, ಕೆ.ಜೆ. ಭಟ್ಟ, ಮಂಜುನಾಥ ಜನ್ನು, ಸುಬ್ರಾಯ ವಾಳ್ಕೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.