ಕೊಟ್ಟೂರು (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಗುರುವಾರ ಬೀಸಿದ ಗಾಳಿ, ಮಳೆಗೆ ಮನೆಯ ಮೇಲ್ಚಾವಣೆ ತಗಡು ಕುಸಿದು ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಶುಕ್ರವಾರ ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ದಡ್ಡಿ ನಾಗಮ್ಮ (48) ಮೃತ ಮಹಿಳೆ. ಮಳೆಗಿಂತಲೂ ಹೆಚ್ಚಾಗಿ ಬಲವಾಗಿ ಗಾಳಿ ಬೀಸಿದ್ದರಿಂದ ಮನೆಯ ಮೇಲ್ಚಾವಣೆ ತಗಡು ಕುಸಿದು ಬಿದ್ದಿತ್ತು. ಅದು ನಾಗಮ್ಮ ಅವರ ತಲೆಯ ಮೇಲೆಯೇ ಬಿದ್ದ ಕಾರಣ ಅವರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಗರಿಬೊಮ್ಮನಹಳ್ಳಿಗೆ ಹಾಗೂ ಕೊನೆಗೆ ಕೊಪ್ಪಳದ ಜಿಲ್ಲಾ ಅಸ್ಪತ್ರೆಗೆ ದಾಖಲಿಸಲಾಗಿತ್ತು.
ಕಂದಾಯ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ಶುಕ್ರವಾರ ಮನೆಗೆ ಭೇಟಿ ನೀಡಿ ಹಾನಿಯ ಕುರಿತು ಪರಿಶೀಲನೆ ನಡೆಸಿದರು.