ಹೊಸಪೇಟೆ (ವಿಜಯನಗರ): ‘ಲಂಚ ಕೊಟ್ಟರೆ ನೌಕರಿ, ಮಂಚ ಏರಿದರೆ ಅಧಿಕಾರ’ ಎಂದು ಹೇಳಿ ಮಹಿಳಾ ಸಮಾಜಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಅವಮಾನ ಮಾಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಪಟೇಲ್ ನಗರದ ಬಿಜೆಪಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ನಡೆಸಿದರು. ರ್ಯಾಲಿಯುದ್ದಕ್ಕೂ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಹಾಕಿದರು.
ಜವಾಬ್ದಾರಿ ಸ್ಥಾನದಲ್ಲಿರುವ ಪ್ರಿಯಾಂಕ್ ಖರ್ಗೆಯವರು ಮಹಿಳಾ ಕುಲಕ್ಕೆ ಅಪಮಾನವೆಸಗುವ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಇದು ಅವರು ಹಾಗೂ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ತೋರಿಸುತ್ತದೆ. ಖರ್ಗೆ ಹಾಗೂ ಪಕ್ಷ ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಹಾಗೂ ಖರ್ಗೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಅಧ್ಯಕ್ಷೆ ಆರುಂಡಿ ಸುವರ್ಣ ನಾಗರಾಜ್, ಭಾರತಿ ಬಸವನಗೌಡ ಪಾಟೀಲ, ಉಮಾದೇವಿ ಬಸವರಾಜ, ಬಿ. ಸರೋಜಿನಿ, ಸುನೀತಾಬಾಯಿ ಎಂ., ಅನುರಾಧಾ ಎಂ.ಕೆ., ಲತಾ, ರೇಣುಕಾ, ಬಿ.ಕೆ. ಸರಸ್ವತಿ, ಸುಶೀಲಾ, ಉಮಾ ಎಂ.ಬಿ., ಕನಕ, ಶಾಂತಮ್ಮ, ಪೂರ್ಣಿಮಾ, ನಾಗರತ್ನ, ಶೋಭಾ, ರೇಣುಕಮ್ಮ ಇತರರಿದ್ದರು.