ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22 ಜನರ ಹೆಸರಲ್ಲಿ ಪರಮೇಶ್ವರನಾಯ್ಕ ಬೇನಾಮಿ ಆಸ್ತಿ: ಕೆ.ಸಿ.ಕೊಂಡಯ್ಯ ಆರೋಪ

Last Updated 4 ಮಾರ್ಚ್ 2023, 16:33 IST
ಅಕ್ಷರ ಗಾತ್ರ

ಹೂವಿನಹಡಗಲಿ (ವಿಜಯನಗರ): ‘ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹಡಗಲಿ ಕ್ಷೇತ್ರ ಲೂಟಿ ಮಾಡಿ 22 ಜನ ಬೆಂಬಲಿಗರ ಹೆಸರಲ್ಲಿ ಕೋಟ್ಯಂತರ ಮೌಲ್ಯದ ಬೇನಾಮಿ ಆಸ್ತಿ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಸ್ವಪಕ್ಷೀಯ ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿದರು.

ಪಟ್ಟಣದ ಕಾಯಕ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಮೇಶ್ವರನಾಯ್ಕ ಬೆಂಗಳೂರಿನಲ್ಲಿ ಬಂಗಲೆ, ವಾಣಿಜ್ಯ ಸಂಕಿರ್ಣ ಹೊಂದಿದ್ದಾರೆ. ಹಡಗಲಿ, ಹರಪನಹಳ್ಳಿ, ಮುಂಡರಗಿ, ದಾವಣಗೆರೆಯಲ್ಲಿ ಅಪಾರ ಪ್ರಮಾಣದ ಆಸ್ತಿಗಳು ಬೇನಾಮಿ ಹೆಸರಲ್ಲಿವೆ. ಹರಪನಹಳ್ಳಿಯಲ್ಲಿ ಕ್ರಷರ್, ಮಿಕ್ಸರ್ ಪ್ಲಾಂಟ್ ಹೊಂದಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತರು, ಹರಪನಹಳ್ಳಿಯ ಅವರ ಸಂಬಂಧಿಗಳೇ ಅಕ್ರಮ ಆಸ್ತಿ ವಿವರವನ್ನು ನನಗೆ ಒದಗಿಸಿದ್ದಾರೆ ಎಂದು ತಿಳಿಸಿದರು.

‘ಶಾಸಕರ ಆಸ್ತಿಗಳು ಚಂದ್ರನಾಯ್ಕ, ಮಂಜುಳಾ ಪೋಮ್ಯಾನಾಯ್ಕ, ಕುಮಾರನಾಯ್ಕ, ಆನಂದನಾಯ್ಕ, ಐ. ಚಿದಾನಂದ ಸೇರಿ 22 ಜನರ ಹೆಸರಲ್ಲಿ ಇವೆ. ಬೇನಾಮಿ ಆಸ್ತಿಗಳಿಗೂ ನನಗೂ ಸಂಬಂಧವಿಲ್ಲ ಎಂದು ಶಾಸಕ ನುಣುಚಿಕೊಳ್ಳುತ್ತಿರುವುದರಿಂದ ಈ ಆಸ್ತಿಗಳನ್ನು ಯಾರೂ ಅವರಿಗೆ ಹಿಂದುರಿಗಿಸದಂತೆ ಮಾಧ್ಯಮ ಮೂಲಕ ಮನವಿ ಮಾಡುತ್ತೇನೆ’ ಎಂದರು.

ಪರಮೇಶ್ವರನಾಯ್ಕ1999ರಲ್ಲಿ ಮೊದಲ ಬಾರಿ ಶಾಸಕನಾದಾಗ ಒಂದು ಜನತಾ ಮನೆ, ಏಳು ಎಕರೆ ಜಮೀನು ಮಾತ್ರ ಇತ್ತು. ಈಗ ಲೆಕ್ಕಕ್ಕೆ ಸಿಗದಷ್ಟು ಅಕ್ರಮ ಆಸ್ತಿ ಮಾಡಿದ್ದಾರೆ. ಲೋಕಾಯುಕ್ತದವರು ಶಾಸಕರಾದ ನೆಹರೂ ಓಲೆಕಾರ್, ಮಾಡಾಳ್ ವಿರುಪಾಕ್ಷಪ್ಪ ಮೇಲೆ ದಾಳಿ ಮಾಡಿದಂತೆ ಪರಮೇಶ್ವರನಾಯ್ಕ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಕ್ಷೇತ್ರದ ಅಭಿವೃದ್ಧಿ, ಜನರ ಹಿತ ಮರೆತು ಭ್ರಷ್ಟಾಚಾರದಲ್ಲಿ ಮುಳುಗಿರುವ ಶಾಸಕನಿಗೆ ಕ್ಷೇತ್ರದ ಜನರು ಈ ಬಾರಿ ಪಾಠ ಕಲಿಸಬೇಕು. ಇಲ್ಲಿನ ಬೆಳವಣಿಗೆಯನ್ನು ಕಾಂಗ್ರೆಸ್ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಮತ್ತೊಮ್ಮೆ ವೀಕ್ಷಕರನ್ನು ಕಳಿಸಿ, ಜನಾಭಿಪ್ರಾಯ ಆಧಾರದಲ್ಲಿ ಟಿಕೆಟ್ ಬೇರೆಯವರಿಗೆ ನೀಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ಕೃಷ್ಣನಾಯ್ಕ, ಹರೀಶ್, ಮೋತಿನಾಯ್ಕ ಇದ್ದರು.

ನೋಟಿಸ್‌ಗೆ ಉತ್ತರ ಕೊಟ್ಟಿರುವೆ: ಶಾಸಕರನ್ನು ಟೀಕಿಸಿದ್ದಕ್ಕಾಗಿ ನೀಡಿರುವ ನೋಟಿಸ್ ಗೆ ಈಗಾಗಲೇ ಕಾರಣ ಸಮೇತ ಉತ್ತರ ಕೊಟ್ಟಿರುವೆ. ನಾನೀಗಾಗಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವೆ. ಸತ್ಯ ಮಾತಾಡಲು ನನಗೆ ಯಾವ ಹಿಂಜರಿಕೆ ಇಲ್ಲ. ಭ್ರಷ್ಟಾಚಾರಿಗಳ ವಿರುದ್ಧ ಹೋರಾಟ ಮುಂದುವರಿಸುವೆ ಎಂದು ಹೇಳಿದರು.

ಶಾಸಕನ ವರ್ತನೆಗೆ ಬೇಸತ್ತು ಈಚೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ರಾಜೀನಾಮೆ ನೀಡಿದ್ದಾರೆ. ಇಟ್ಟಿಗಿಯಲ್ಲಿ ಇವರ ವಿರುದ್ಧ ಪ್ರತಿಭಟಿಸಿದವರ ಮೇಲೆ ಕೇಸ್ ಹಾಕಿಸಿದ್ದಾರೆ. ದ್ವೇಷದ ರಾಜಕಾರಣ ಮಾಡುವವರು ಈ ಕ್ಷೇತ್ರಕ್ಕೆ ಬೇಕಾ ಎಂಬುದನ್ನು ಜನರು ತೀರ್ಮಾನಿಸಬೇಕು. ಪರಿಮಳ ಬೀರಲಿ ಎಂದು ಮಲ್ಲಿಗೆ ಹೂ ಗಿಡ ನೆಟ್ಟೆವು. ಅದರಲ್ಲೀಗ ಪಾರ್ಥೇನೆಯಂ (ಕಾಂಗ್ರೆಸ್) ಹೂ ಬಿಟ್ಟಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT