ಹೊಸಪೇಟೆ (ವಿಜಯನಗರ): ಅರ್ಚಕ ಕೃಷ್ಣ ಭಟ್ (87) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ಬೆಳಿಗ್ಗೆ ಹಂಪಿಯ ಅವರ ಮನೆಯಲ್ಲಿ ನಿಧನ ಹೊಂದಿದರು.
ಮೃತರಿಗೆ ಮೂವರು ಗಂಡು, ಒಬ್ಬ ಹೆಣ್ಣು ಮಗಳಿದ್ದಾರೆ. ಭಾನುವಾರ ಮಧ್ಯಾಹ್ನ ಹಂಪಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಕೃಷ್ಣ ಭಟ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಾಸರವಳ್ಳಿಯವರು. 1979ರಲ್ಲಿ ಹಂಪಿಗೆ ಬಂದು ನೆಲೆಸಿದರು. ಅಂದಿನಿಂದ ಸತತವಾಗಿ 2020ನೇ ಸಾಲಿನ ನವೆಂಬರ್ ವರೆಗೆ ಒಂದು ದಿನವೂ ತಪ್ಪಿಸದೇ ಹಂಪಿ ಬಡವಿಲಿಂಗಕ್ಕೆ ಪೂಜೆ ನೆರವೇರಿಸಿದ್ದಾರೆ. ನಡೆಯಲಿಕ್ಕಾಗದೇ ಹಾಸಿಗೆ ಹಿಡಿದ ಕಾರಣ ಅವರ ಮಗ ರಾಘವ ಭಟ್ ಅವರು ಪೂಜೆ ಮುಂದುವರೆಸಿದ್ದಾರೆ.
ಹಂಪಿಯಲ್ಲಿನ ಬಡವಿಲಿಂಗ, ಏಕಶಿಲೆಯಲ್ಲಿ ಕೆತ್ತನೆ ಮಾಡಿರುವುದರಿಂದ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಕೃಷ್ಣ ಭಟ್ ಅವರು ಬಡವಿಲಿಂಗಕ್ಕೆ ಪೂಜೆ ಮಾಡುವುದನ್ನು ಕಣ್ತುಂಬಿಕೊಳ್ಳಲು, ಅದರ ಛಾಯಾಚಿತ್ರ ಸೆರೆ ಹಿಡಿಯಲು ದೂರದ ಸ್ಥಳಗಳಿಂದ ಜನ ಬರುತ್ತಿದ್ದರು.