‘ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಸರ್ಕಾರವಿರಲಿ ಕಾರ್ಖಾನೆಗಳಿಗೆ ಜಮೀನು ಮಾರಾಟ ಮಾಡುವುದಕ್ಕೆ ಈಗಲೂ ನನ್ನ ವಿರೋಧವಿದೆ. ಯಾವುದೇ ಕಾರ್ಖಾನೆಗೆ ಭೂಮಿ ಕೊಡಬೇಕಾದರೆ ನೀತಿ ರೂಪಿಸಬೇಕು. 50, 100 ಎಷ್ಟು ವರ್ಷಗಳಾದರೂ ಜಮೀನು ಕೊಡಲಿ. ಒಂದುವೇಳೆ ಭವಿಷ್ಯದಲ್ಲಿ ಕಾರ್ಖಾನೆ ಮುಚ್ಚಿದರೆ ಆ ಜಮೀನು ಪುನಃ ಸರ್ಕಾರಕ್ಕೆ ಸೇರಬೇಕು ಎನ್ನುವುದು ನನ್ನ ವಾದ’ ಎಂದು ಹೇಳಿದರು.
‘ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರೆ ಸರ್ಕಾರದ ನಿರ್ಧಾರ ವಿರೋಧಿಸುತ್ತಿದ್ದೆ. ಆ ರೀತಿ ಮಾಡಬಾರದು ಅದು ತಪ್ಪು ಎನ್ನುವುದನ್ನು ಹೇಳುತ್ತಿದ್ದೆ. ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಮನುಷ್ಯರ ಪ್ರಾಣ ಮುಖ್ಯವಾಗಿದ್ದರಿಂದ ಸಂಪುಟ ಸಭೆಗೆ ಹೋಗುವುದರ ಬದಲು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಕೋವಿಡ್ ನಿಯಂತ್ರಣಕ್ಕೆ ಏನೇನು ಕ್ರಮ ಕೈಗೊಳ್ಳಬಹುದು ಎನ್ನುವುದರ ಬಗ್ಗೆ ಸಮಾಲೋಚನೆಯಲ್ಲಿ ತೊಡಗಿದ್ದೆ. ಸಂಪುಟ ಸಭೆಯ ಅಜೆಂಡಾ ನೋಡಬೇಕಿತ್ತು. ಆದರೆ, ನನಗೆ ನೋಡಲು ಸಾಧ್ಯವಾಗಿರಲಿಲ್ಲ’ ಎಂದು ತಿಳಿಸಿದರು.