ಹೊಸಪೇಟೆ (ವಿಜಯನಗರ): 2020–21ನೇ ಸಾಲಿನ ಜಕಣಾಚಾರಿ ಪ್ರಶಸ್ತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕಲಾವಿದ ಡಿ. ಹುಸೇನ್ ಹಾಗೂ 2021–22ನೇ ಸಾಲಿನ ಬಿ.ವಿ. ಕಾರಂತ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಅಬ್ದುಲ್ ಪಿಂಜಾರ ಆಯ್ಕೆಯಾಗಿದ್ದಾರೆ.
ಶಿಲ್ಪ ಕಲಾವಿದರಾದ ಡಿ. ಹುಸೇನ್ ಅವರು ಮೂಲತಃ ತಾಲ್ಲೂಕಿನ ಕಮಲಾಪುರದವರು. ಹಂಪಿ, ಐಹೊಳೆ, ಪಟ್ಟದಕಲ್ಲು ಸೇರಿದಂತೆ ಹಲವೆಡೆ ಭಾರತೀಯ ಪುರಾತತ್ವ ಇಲಾಖೆಯೊಂದಿಗೆ ಕೆಲಸ ಮಾಡಿ ಹಳೆಯ ಶಿಲ್ಪಕಲಾಕೃತಿಗಳ ದುರಸ್ತಿ, ಮರುಜೀವ ಕೊಡುವ ಕೆಲಸ ಮಾಡಿದ್ದಾರೆ. 56 ವರ್ಷ ವಯಸ್ಸಿನ ಹುಸೇನ್ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜರುಗುವ ಪ್ರತಿಯೊಂದು ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸುತ್ತಾರೆ. ಇವರ ಕೈಯಲ್ಲೇ ಶಿಲ್ಪವನ ಅರಳಿದೆ.
ಇನ್ನು, ಅಬ್ದುಲ್ ಪಿಂಜಾರ ಅವರು ಮೂಲತಃ ನಗರದ ಸಿದ್ದಲಿಂಗಪ್ಪ ಚೌಕಿಯ ನಿವಾಸಿ. 42 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. 65 ವರ್ಷ ವಯಸ್ಸಿನ ಅಬ್ದುಲ್ ಅವರು ಅಸಂಖ್ಯ ಕೊಳೆಗೇರಿ ಮಕ್ಕಳಿಗೆ ರಂಗ ತರಬೇತಿ ನೀಡಿದ್ದಾರೆ. ಬೀದಿ ನಾಟಕ, ಮಕ್ಕಳ ನಾಟಕ ಇವರು ಹೆಚ್ಚು ಕೆಲಸ ಮಾಡಿದ ಕ್ಷೇತ್ರ. ಅಬ್ದುಲ್ ಮಾಮ ಎಂದೇ ಹೆಸರಾಗಿದ್ದಾರೆ. ಅನೇಕ ಸಾಮಾಜಿಕ ಹೋರಾಟಗಳಲ್ಲೂ ಪಾಲ್ಗೊಂಡಿದ್ದಾರೆ. ಸಿದ್ದಲಿಂಗಪ್ಪ ಚೌಕಿಯಲ್ಲಿ ರಂಗಭೂಮಿ ನಡೆಸುತ್ತಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.