ಹೊಸಪೇಟೆ (ವಿಜಯನಗರ): ತಾಯಿ ಭುವನೇಶ್ವರಿ ಸನ್ನಿಧಿ ಹಂಪಿಯಿಂದ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಜಿಲ್ಲಾಡಳಿತ ವತಿಯಿಂದ ಕರ್ನಾಟಕ ಸಂಭ್ರಮ-50ರ ವಿಶೇಷ ಕಾರ್ಯಕ್ರಮ ಹಂಪಿಯ ಎದುರು ಬಸವಣ್ಣ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ ಜ್ಯೋತಿ ರಥಯಾತ್ರೆ ಅಂಗವಾಗಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆಗೆ ನಡೆಸಲಾಯಿತು.
ಹಂಪಿಯ ವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಜಾನಪದ ಕಲಾತಂಡಗಳೊಂದಿಗೆ ಆರಂಭವಾದ ಮೆರವಣಿಗೆಯು ಬಸವಣ್ಣ ಮಂಟಪ ವೇದಿಕೆವರೆಗೂ ಸಾಗಿತು.
ಮೆರವಣಿಗೆಯಲ್ಲಿ ತಾಷರಂಡೋಲ್, ಹಲಗೆವಾದನ, ವೀರಗಾಸೆ ನೃತ್ಯ, ನಾದಸ್ವರ ವಾದನ, ಶಹನಾಯಿ ವಾದನ, ಕಹಳೆ ವಾದನ, ಡೊಳ್ಳು ಕುಣಿತ, ಹಗಲುವೇಷ, ಕುದುರೆ ಕುಣಿತ, ನಂದಿಧ್ವಜ, ಸಮಾಳ, ಕೋಲಾಟ, ಗೊರವರಕುಣಿತ, ಬುಡಕಟ್ಟು ನೃತ್ಯ, ಮರಗಾಲು ಕುಣಿತ, ಗೊಂಬೆ ಕುಣಿತ, ಕೀಲುಕುದರೆ ಕುಣಿತ, ಜಾನಪದ ಕಲಾ ತಂಡ, ಲಂಬಾಣಿ ನೃತ್ಯ, ಹೆಜ್ಜೆಮೇಳ, ಮಕ್ಕಳ ಡೊಳ್ಳು ಕುಣಿತ, ಮಹಿಳಾ ಉರುಮೆ ವಾದ, ನಂದಿಧ್ವಜ, ಗಾರುಡಿ ಗೊಂಬೆ, ಹಕ್ಕಿಪಿಕ್ಕಿ ನೃತ್ಯ, ಗೊಂದಲಿಗರ ಹಾಡು, ಸುಡುಗಾರು ಸಿದ್ದರ ವೇಷ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸುಮಾರು 50ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿದ್ದವು.