ಹೊಸಪೇಟೆ (ವಿಜಯನಗರ): ನಗರ ಹೊರವಲಯದ ಕಣಿವೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಶುಕ್ರವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
ಚಿರತೆ ನೋಡಿದ ದೇವಸ್ಥಾನದ ಪೂಜಾರಿ, ಅವರ ಕುಟುಂಬ ವರ್ಗದವರು ತೀವ್ರ ಆತಂಕದಲ್ಲಿದ್ದಾರೆ. ದೇವಸ್ಥಾನದ ಮಗ್ಗುಲಲ್ಲಿ ರಾಯರ ಕೆರೆ ಸುತ್ತಮುತ್ತ ಗದ್ದೆಗಳಿವೆ. ನಿತ್ಯ ರೈತರು ಹೋಗಿ ಬರುತ್ತಾರೆ. ವಿಷಯ ತಿಳಿದು ಅವರೂ ಹೆದರಿದ್ದಾರೆ. ಚಿರತೆ ಕಂಡ ವಿಷಯ ಗೊತ್ತಾಗಿ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇವಸ್ಥಾನಕ್ಕೆ ಹೊಂದಿಕೊಂಡಂತೆ ಗುಂಡಾ ಅರಣ್ಯ ಇದೆ. ಅಲ್ಲಿಂದ ಆಗಾಗ ಚಿರತೆ, ಕರಡಿ, ಕಾಡು ಹಂದಿಗಳು ಬರುತ್ತಿರುತ್ತವೆ.