ಹೊಸಪೇಟೆ (ವಿಜಯನಗರ): ‘ತಾಲ್ಲೂಕಿನ ಹಂಪಿ ಮಾತಂಗ ಪರ್ವತದಲ್ಲಿ ರಾಜಮಾತಂಗಿ ಮಹಾಯಜ್ಞ ಸೆ. 25ರಂದು ಹಮ್ಮಿಕೊಳ್ಳಲಾಗಿದೆ. ಲೋಕಕಲ್ಯಾಣ ಇದರ ಉದ್ದೇಶ. ಪರಿಶಿಷ್ಟರೆಲ್ಲರೂ ಇದರಲ್ಲಿ ಭಾಗವಹಿಸಬಹುದು. ಯಾರಿಗೂ ದಂಡದ ಭಯಬೇಕಿಲ್ಲ’
ರಾಜಮಾತಂಗಿ ಮಹಾಯಜ್ಞ ಸಮಿತಿಯ ಮುಖಂಡರಾದ ಉಮಾಪತಿ, ಎಂ.ಸಿ. ವೀರಸ್ವಾಮಿ, ಬಸವರಾಜ, ಮರಿದಾಸ್, ರಾಘವೇಂದ್ರ, ಜಗನ್ ಶುಕ್ರವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಮೇಲಿನಂತೆ ಹೇಳಿದರು.
ಇತ್ತೀಚೆಗೆ ಕೋಲಾರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪರಿಶಿಷ್ಟ ಸಮಾಜದವರಿಗೆ ದಂಡ ವಿಧಿಸಲಾಗಿದೆ. ಆದರೆ, ನಮ್ಮ ಕಾರ್ಯಕ್ರಮ ಹಾಗಿಲ್ಲ. ಎಲ್ಲರೂ ಭಾಗವಹಿಸಬಹುದು. ಯಾವುದೇ ಭೇದ ಭಾವ ಇಲ್ಲ. ದಂಡ ಹಾಕುವ ಭಯವೂ ಬೇಕಿಲ್ಲ ಎಂದು ಹೇಳಿದರು.
ಸೆ. 25ರಂದು ಬೆಳಿಗ್ಗೆ ಮಹಾಯಜ್ಞ ನಡೆಯಲಿದೆ. ಅನಂತರ ಮಾತಂಗಿ ದೇವಿಯ ಪಲ್ಲಕ್ಕಿ ಮೆರವಣಿಗೆ ಹಂಪಿ ವಿರೂಪಾಕ್ಷೇಶ್ವರ ದೇಗುಲದಿಂದ ಮಾತಂಗ ಪರ್ವತದ ವರೆಗೆ ನಡೆಯಲಿದೆ. ಹಂಪಿಯ ಮಾತಂಗ ಪರ್ವತದ ಪೂರ್ಣಾನಂದ ಭಾರತಿ ಸ್ವಾಮೀಜಿ, ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ, ಬುಕ್ಕಸಾಗರದ ಕರಿಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಹಾಯಜ್ಞ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳ ಎರಡು ಸಾವಿರ ಜನ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಮಾತಂಗ ಬೆಟ್ಟದ ಮೆಟ್ಟಿಲು ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ₹6.5 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅವರಿಗೆ ಸಮಾಜದ ಪರವಾಗಿ ಕಾರ್ಯಕ್ರಮದಲ್ಲಿ ಸತ್ಕರಿಸಲಾಗುವುದು ಎಂದು ಹೇಳಿದರು.