ಹೊಸಪೇಟೆ (ವಿಜಯನಗರ): ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಆ. 20ರಂದು ನಗರಕ್ಕೆ ಭೇಟಿ ನೀಡಲಿರುವುದರಿಂದ ವಾಯುಸೇನೆಯ ಹೆಲಿಕಾಪ್ಟರ್ ಇಲ್ಲಿನ ಮುನ್ಸಿಪಲ್ ಮೈದಾನಕ್ಕೆ ಬಂದಿಳಿದೆ.
ಮುನ್ಸಿಪಲ್ ಮೈದಾನದ ಒಳಾಂಗಣ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಹೆಲಿಪ್ಯಾಡ್ ಇದೆ. ಆದರೆ, ಉಪರಾಷ್ಟ್ರಪತಿ ಭೇಟಿ ನಿಮಿತ್ತ ಮುನ್ಸಿಪಲ್ ಮೈದಾನದ ಮಧ್ಯ ಭಾಗದಲ್ಲಿ ಮತ್ತೊಂದು ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಮೈದಾನದ ಸುತ್ತ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಯಾರೂ ಒಳ ಬರದಂತೆ ಭದ್ರತೆ ಕಲ್ಪಿಸಲಾಗಿದೆ.
ತಾತ್ಕಾಲಿಕವಾಗಿ ನಿರ್ಮಿಸಿರುವ ಹೆಲಿಪ್ಯಾಡ್ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಪೂರ್ವಾಭ್ಯಾಸ ಬುಧವಾರ ನಡೆಯಿತು. ಹಲವು ಸಲ ಹೆಲಿಕಾಪ್ಟರ್ ಹಾರಾಟ, ಲ್ಯಾಂಡಿಂಗ್ ನಡೆಯಿತು. ಹೀಗಾಗಿ ನಗರದ ಜನತೆಯ ಚಿತ್ತ ಆಕಾಶದತ್ತ ನೆಟ್ಟಿತ್ತು. ಹೆಲಿಕಾಪ್ಟರ್ ನೋಡಲು ಮೈದಾನದ ಸುತ್ತ ಜನ ಸೇರಿದ್ದರು. ಮೈದಾನದಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್ ಎಚ್. ವಿಶ್ವನಾಥ್ ಬೀಡು ಬಿಟ್ಟಿದ್ದು, ಪ್ರತಿಯೊಂದನ್ನು ಪರಿಶೀಲಿಸುತ್ತಿದ್ದಾರೆ.