ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ವರ್ಣರಂಜಿತ ಕಾರ್ಯಕ್ರಮಕ್ಕೆ ಭಾನುವಾರ ತಡರಾತ್ರಿ ತೆರೆ ಬಿದ್ದ ನಂತರ ನಗರ ಮೌನಕ್ಕೆ ಜಾರಿದೆ.
ಶುಕ್ರವಾರದಿಂದಲೇ ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಸರ್ಕಾರಿ ಕಟ್ಟಡಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಕಾರ್ಯಕ್ರಮ ನಡೆದ ಜಿಲ್ಲಾ ಕ್ರೀಡಾಂಗಣದಲ್ಲಿ ಮತ್ತೊಂದು ಹಂಪಿ ಸೃಷ್ಟಿಯಾಗಿತ್ತು. ಸಂಜೆಯಿಂದ ರಾತ್ರಿ ವರೆಗೆ ನಡೆದ ಧ್ವನಿ, ಬೆಳಕಿನ ಕಾರ್ಯಕ್ರಮಗಳು ಎಲ್ಲರನ್ನೂ ಆಕರ್ಷಿಸಿತ್ತು.
ಎರಡು ದಿನ ನಡೆದ ಕಾರ್ಯಕ್ರಮಕ್ಕೆ ಸಹಸ್ರಾರು ಜನ ಸಾಕ್ಷಿಯಾದರು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದದ್ದರಿಂದ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ಈಗ ಅದ್ಯಾವುದೂ ಇಲ್ಲ. ಸೋಮವಾರ ಕ್ರೀಡಾಂಗಣದಲ್ಲಿ ಹಾಕಿದ್ದ ಬೃಹತ್ ವೇದಿಕೆಯನ್ನು ತೆರವುಗೊಳಿಸುವ ಕಾರ್ಯ ನಡೆಯಿತು. ಬೆಳಿಗ್ಗೆಯೇ ಎಲ್ಲ ವೃತ್ತಗಳು, ರಸ್ತೆಯ ಎರಡು ಬದಿಯಲ್ಲಿ ಹಾಕಿದ್ದ ವಿದ್ಯುತ್ ದೀಪಗಳನ್ನು ತೆಗೆಯಲಾಯಿತು. ಕ್ರೀಡಾಂಗಣ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಕಾರ್ಮಿಕರು ವಸ್ತುಗಳನ್ನು ಸಾಗಿಸುತ್ತಿದ್ದರು.