ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ತುಪ್ಪಾಕನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಮನೆಯ ಮೇಲ್ಛಾವಣಿ ಕುಸಿದು ಕೊಟ್ರಮ್ಮ(51) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕೊಟ್ರಮ್ಮ ಹಾಗೂ ಅವರ ಮಗ ಸಿದ್ದಲಿಂಗ ಸ್ವಾಮಿ ಮನೆಯಲ್ಲಿ ಮಲಗಿದ್ದರು. ರಾತ್ರಿ 2ರ ಸುಮಾರಿಗೆ ಮನೆಯ ಮೇಲ್ಛಾವಣಿ ಕುಸಿದಿದೆ. ಕೊಟ್ರಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕುಸಿತದ ಶಬ್ದ ಕೇಳಿ ಸಿದ್ದಲಿಂಗ ಸ್ವಾಮಿ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಕೊಟ್ರಮ್ಮ ಅವರ ಪತಿ ರುದ್ರಯ್ಯ ಮನೆಯ ಹೊರಗಡೆ ಮಲಗಿದ್ದರು. ಇತ್ತೀಚೆಗೆ ಸತತ ಸುರಿದ ಮಳೆಗೆ ಮನೆಯ ಮೇಲ್ಛಾವಣಿ ನೆನೆದು ಕುಸಿದು ಬಿದ್ದಿರುವ ಸಾಧ್ಯತೆ ಇದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ತಹಶಿಲ್ದಾರ್ ಟಿ. ಜಗದೀಶ ತಿಳಿಸಿದರು. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಂ. ಬಸಣ್ಣ ಇದ್ದರು.