ಹೊಸಪೇಟೆ (ವಿಜಯನಗರ): ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ನಗರದಲ್ಲಿ ಬುಧವಾರ ಜಾಗೃತಿ ಜಾಥಾ ನಡೆಸಲಾಯಿತು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರು ಜಾಥಾಕ್ಕೆ ಚಾಲನೆ ನೀಡಿದರು. ನಂತರ ನಗರದ ಪ್ರಮುಖ ಮಾರ್ಗಗಳಲ್ಲಿ ಜಾಥಾ ನಡೆಯಿತು.
ವಿಜಯನಗರ ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಷಣ್ಮುಖ ನಾಯಕ ಮಾತನಾಡಿ, ‘ಒಂದು ಆರೋಗ್ಯ, ಶೂನ್ಯ ಮರಣ’ ಎಂಬ ಧ್ಯೇಯ ವಾಕ್ಯದೊಂದಿಗೆ 2030ರ ವೇಳೆಗೆ ರೇಬೀಸ್ ಪ್ರಕರಣದಿಂದ ಮರಣ ಹೊಂದುವವರ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ಗುರಿ ಹೊಂದಲಾಗಿದೆ ಎಂದರು.
‘ಜಗತ್ತಿನಲ್ಲಿ ಹುಚ್ಚು ನಾಯಿ ಕಡಿತದಿಂದ ಸುಮಾರು 50 ರಿಂದ 55 ಸಾವಿರ ಜನ ಮರಣ ಹೊಂದುತ್ತಿದ್ದಾರೆ. ರೇಬೀಸ್ ಕಾಯಿಲೆ ಒಂದು ಸಲ ಬಂದರೆ ಮರಣ ಬಹುತೇಕ ಖಚಿತವಿದ್ದಂತೆ. ಸಮಯಕ್ಕೆ ಲಸಿಕೆಯನ್ನು ಹಾಕಿಸಿಕೊಳ್ಳುವುದರ ಮೂಲಕ ಸಾವು ತಡೆಯಬಹುದು’ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷ ಆನಂದ್, ಆರೋಗ್ಯ ನಿರೀಕ್ಷಣಾಧಿಕಾರಿ ಧರ್ಮನಗೌಡ, ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ ನಾಯ್ಕ, ಜಿಲ್ಲಾ ಮೆಲೇರಿಯಾ ಅಧಿಕಾರಿ ಡಾ.ಕಮಲಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಟಿ.ಎಂ.ಎ.ಇ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.