ವಿಜಯಪುರ: ‘ಪಠ್ಯದಿಂದ ಟಿಪ್ಪು ವಿಷಯವನ್ನು ಕೈಬಿಟ್ಟರೆ ನಾಡಿನ ಗೌರವ, ಸ್ವಾಭಿಮಾನ ಹೆಚ್ಚಿಸಿದಂತೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಲ್ಲಿ ಹೇಳಿದರು.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟರು ಇತಿಹಾಸವನ್ನು ತಿರುಚಿದ್ದಾರೆ. ಈಗ ಅದನ್ನು ಸರಿಪಡಿಸುವ ಕಾರ್ಯ ನಡೆದಿದೆ. ಟಿಪ್ಪು ಅನೇಕ ಸಮುದಾಯಗಳ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅನೇಕ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾನೆ. ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟಿಪ್ಪು ಪಠ್ಯ ತೆಗೆಯಲು ಮುಂದಾಗಿದ್ದಾರೆ’ ಎಂದು ಖಾರವಾಗಿ ಹೇಳಿದರು.
‘ಮಹಾರಾಣಾ ಪ್ರತಾಪ್ಸಿಂಗ್, ಪೃಥ್ವಿರಾಜ್ ಚೌಹಾಣ್ ಕೊಡುಗೆಯನ್ನು ಪಠ್ಯದಲ್ಲಿ ಸೇರಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ ಮಾತ್ರ ಪಾಲ್ಗೊಂಡಿಲ್ಲ. ಸ್ವಾತಂತ್ರ್ಯ ಸಿಗಲು ನೇತಾಜಿ ಸುಭಾಷಚಂದ್ರ ಬೋಸ್ ಕಾರಣ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರೇ ಹೇಳಿದ್ದಾರೆ. ಹೀಗಾಗಿ ಅಂಬೇಡ್ಕರ್ ವಿಚಾರಧಾರೆಗಳನ್ನು ದೇಶದ ಮುಂದಿಡುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
‘ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಹಾಗೂ ರಾಜೀವಗಾಂಧಿ ಅವರು ತಾವೇ ಭಾರತರತ್ನ ತೆಗೆದುಕೊಂಡಿದ್ದಾರೆ. ಆದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡದೇ ಅಪಮಾನ ಮಾಡಿದ್ದಾರೆ. ದೇಶದಲ್ಲಿ ನೆಹರೂ ಮನೆತನಕ್ಕೆ ಇದುವರೆಗೆ ನೀಡಿರುವ ಗೌರವ ಸಾಕು, ಅಷ್ಟೊಂದು ಗೌರವ ನೀಡುವುದು ಅನಗತ್ಯ’ ಎಂದು ತಿಳಿಸಿದರು.