ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಜೋಳ ವಿರುದ್ಧದ ಆರೋಪ ಸುಳ್ಳು: ಕೋಳಕೂರ

Last Updated 21 ಜನವರಿ 2022, 3:46 IST
ಅಕ್ಷರ ಗಾತ್ರ

ವಿಜಯಪುರ: ‘ಕಾರಜೋಳ ವಿರುದ್ಧ ಲಿಂಗಾಯತರನ್ನು ಎತ್ತಿಕಟ್ಟುವ ಕೆಲಸವನ್ನು ಎಂ.ಬಿ. ಪಾಟೀಲರು ಬಿಡಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಉಮೇಶ ಕೋಳಕೂರ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರಜೋಳ ಬೆಂಬಲಿಗರು ಮನೆ ಎದುರು ಪ್ರತಿಭಟನೆ, ಪ್ರತಿಕೃತಿ ದಹನ ಮಾಡಿ ಅವಮಾನ ಮಾಡಿದ್ದಾರೆ ಎಂದು ಪಾಟೀಲ ಬೆಂಬಲಿಗರು ಕಿತ್ತೂರು ಚನ್ನಮ್ಮ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಆರೋಪಿಸಿದ್ದಾರೆ. ಪ್ರತಿಭಟನೆ, ಪ್ರತಿಕೃತಿ ದಹನಕ್ಕೆ ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಮುತ್ಸದ್ದಿ ರಾಜಕಾರಣಿ ಗೋವಿಂದ ಕಾರಜೋಳ ಅವರನ್ನು ಅವಾಚ್ಯ ಶಬ್ಧಗಳಿಂದ ಎಂ.ಬಿ.ಪಾಟೀಲರು ಅವಮಾನ ಮಾಡಿದ್ದಕ್ಕೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಅವರ ಮನೆ ಎದುರು ಪ್ರತಿಭಟನೆ ಮಾಡಿದ್ದಾರೆಯೇ ಹೊರತು, ಯಾವುದೇ ಒಂದು ನಿರ್ದಿಷ್ಟ ಜಾತಿ, ಜನಾಂಗದವರು ಅವರ ಮನೆ ಎದುರು ಪ್ರತಿಭಟನೆ ಮಾಡಿಲ್ಲ’ ಎಂದರು.

‘ಕಾರಜೋಳ ಅವರು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಜಿಲ್ಲೆಯಲ್ಲಿ ಜಾತಿ ರಾಜಕಾರಣ ಯಾರು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಬಹಿರಂಗ ಚರ್ಚೆಗೂ ಸಿದ್ಧ. ಇನ್ನು ಮುಂದಾದರೂ ನೀತಿಯುತ ಮತ್ತು ಮೌಲ್ಯಯುತ ರಾಜಕಾರಣ ಮಾಡಿ’ ಎಂದು ಸಲಹೆ ನೀಡಿದರು.

‘ಕಾರಜೋಳ, ಪಾಟೀಲರ ನಡುವಿನ ವಾದ, ವಿವಾದಗಳನ್ನು ಇಲ್ಲಿಗೆ ಮುಗಿಸೋಣ ಎಂದು ಪಾಟೀಲ ಬೆಂಬಲಿಗರು ನಿರ್ಣಯ ಅಂಗೀಕರಿಸಿದ್ದೇವೆ ಎನ್ನುತ್ತಾರೆ. ಆದರೆ, ಪ್ರಕರಣವನ್ನು ಜೀವಂತವಿಡಲು ಅವರೇ ದಿನಕ್ಕೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕಾರಜೋಳ ಮತ್ತು ಪಾಟೀಲ ಅವರ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಇನ್ನು ಮುಂದೆ ಯಾರ ಬೆಂಬಲಿಗರು ಮಾತನಾಡುವುದು ಬೇಡ. ಇಲ್ಲಿಗೆ ಮುಗಿಸೋಣ. ಈ ವಿವಾದಕ್ಕೆ ಸಂಬಂಧಿಸಿದಂತೆ ಅವರಿಬ್ಬರೇ ಮಾತನಾಡಬೇಕು’ ಎಂದರು.

ಮುಖಂಡರಾದ ವಿಠಲ ಕಿರೇಸೂರ, ರಾಮು ಜಾಧವ, ಈರಣ್ಣ ಶಿರಮಗೊಂಡ, ಶಿವು ದಳವಾಯಿ, ಮಲ್ಲೂ ಕನ್ನೂರ, ಸಾಹೇಬಗೌಡ ಬಿರಾದಾರ, ಎಂ.ಬಿ.ತುಂಗಳ, ರಾಜೇಂದ್ರ ಕುಲಕರ್ಣಿ, ಸಿದ್ದುಗೌಡ ಪಾಟೀಲ, ಬಸವರಾಜ ಕುರವಶೇಟ್‌, ನವೀನ ಅರಕೇರಿ, ರಾಜುಗೌಡ ಪಾಟೀಲ, ಸಾಬು ಮಾಶ್ಯಾಳ, ಮಲ್ಲಿಕಾರ್ಜುನ ಬೆಳಕೂಡ್‌, ಶಿವಗೊಂಡ ಹಳ್ಳದ, ಸತೀಶ ಪತ್ತಾರೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT