ವಿಜಯಪುರ: ‘ಕೋವಿಡ್ ಬರದಂತೆ ಮುಂಜಾಗೃತಿ ವಹಿಸುವುದು ಅತಿ ಅವಶ್ಯಕ. ಒಂದು ವೇಳೆ ಬಂತೆಂದರೆ ಹೆದರುವ ಅಗತ್ಯವಿಲ್ಲ. ಧೈರ್ಯವಾಗಿ ಎದುರಿಸಬೇಕು. ಮೂರ್ನಾಲ್ಕು ದಿನ ತ್ರಾಸ್ ಆಗುತ್ತದೆ. ಈ ಸಂದರ್ಭದಲ್ಲಿ ಮೂಗು ವಾಸನೆ, ಬಾಯಿ ರುಚಿ ಕಳೆದುಕೊಳ್ಳುತ್ತದೆ. ಆದರೂ ಆಹಾರ ತ್ಯಜಿಸಬಾರದು’ ಎಂದುಕೋವಿಡ್ನಿಂದ ಗುಣಮುಖರಾಗಿರುವ ವಿಜಯಪುರದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಎಂ.ಎಂ.ಕುರವಿನಶೆಟ್ಟಿ ಹೇಳಿದರು.
‘ಚೆಕ್ ಪೋಸ್ಟ್, ಕ್ವಾರಂಟೈನ್ ಕೇಂದ್ರದಲ್ಲಿ ಡ್ಯೂಟಿ ಮಾಡಿದ್ದೆ, ತಾಳಿಕೋಟೆಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ರೈಡ್ ಮಾಡಲು ಹೋಗಿದ್ದೆ. ಹೀಗಾಗಿ ಯಾವಾಗ, ಯಾರಿಂದ ಸೋಂಕು ಬಂತು ಅಂತ ತಿಳಿಯಲಿಲ್ಲ’ ಎಂದರು.
‘ಜುಲೈ 4ರಂದು ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ ಕಾರಣ ಜುಲೈ 12ರ ವರೆಗೆ ಕೆಲಸಕ್ಕೆ ಹೋಗದೇ ಮನೆಯಲ್ಲೇ ಪ್ರತ್ಯೇಕವಾಗಿದ್ದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೆ. ಪತ್ನಿಯೊಬ್ಬಳನ್ನು ಹೊರತು ಪಡಿಸಿ ತಂದೆ, ತಾಯಿ ಸೇರಿದಂತೆ ಯಾರಿಗೂ ಆರಂಭದಲ್ಲಿ ವಿಷಯ ತಿಳಿಸಿರಲಿಲ್ಲ’ ಎಂದು ಹೇಳಿದರು.
‘ಉಸಿರಾಟ ತೊಂದರೆ ಜೊತೆಗೆ ಕೆಮ್ಮು ವಿಪರೀತವಾಗತೊಡಗಿದ ಬಳಿಕ ಕೊರೊನಾ ಸೋಂಕೇ ಇರಬೇಕು ಎಂದು ಅನುಮಾನ ಬಂದು ನಾನೇ ಸ್ವತ ಸರ್ಕಾರಿ ಜಿಲ್ಲಾಸ್ಪತ್ರೆಗೆ ತೆರಳಿ ಐಷೋಲೇಷನ್ ವಾರ್ಡ್ಗೆ ದಾಖಲಾಗಿದೆ. ಆಸ್ಪತ್ರೆಯಲ್ಲಿ ಚೀಟಿ ಬರೆಯಿಸುವಾಗ ಹೆಸರು ಹೇಳಲು ಸಾಧ್ಯವಾಗಷ್ಟು ತೊಂದರೆಯಾಗಿತ್ತು’ ಎಂದರು.
‘ಉಸಿರಾಟ ತೊಂದರೆ ಹೆಚ್ಚಾದ ಕಾರಣಕ್ಕೆ ಆಕ್ಸಿಜನ್ ವಾರ್ಡ್ಗೆ ಕಳುಹಿಸಿದರು. ಐದಾರು ಬಗೆಯ ಗುಳುಗೆಗಳನ್ನು ನೀಡಿದರು. ಆದರೂ ಕೆಮ್ಮು ಕಡಿಮೆಯಾಗಲಿಲ್ಲ. ಎಲ್ಲರಿಗೂ ಏಕ ಪ್ರಕಾರದ ಔಷಧ ನೀಡುತ್ತಿದ್ದರು. ಹೀಗಾಗಿ ನಾನೇ ವೈದ್ಯರ ಬಳಿ ಕೆಮ್ಮಿಗೆ ಪ್ರತ್ಯೇಕ ಔಷಧ ಪಡೆದುಕೊಂಡೆ. 10 ದಿನಗಳ ಬಳಿಕ ಸಂಪೂರ್ಣ ಗುಣಮುಖನಾಗಿ ಮನೆಗೆ ಬಂದಿದ್ದೇನೆ. ಸದ್ಯ ಹೋಂ ಕ್ವಾರಂಟೈನ್ನಲ್ಲಿ ಇದ್ದೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.