ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ಕೋವಿಡ್ ಸೋಂಕು 308 ಜನರಲ್ಲಿ ಕಾಣಿಸಿಕೊಂಡಿದೆ. ಒಬ್ಬರು ಕೋವಿಡ್ನಿಂದ ಸಾವಿಗೀಡಾಗಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 17 ಸಾವಿರದ ಗಡಿ ದಾಟಿದೆ. ಅಲ್ಲದೇ, ಇದುವರೆಗೆ ಕೋವಿಡ್ನಿಂದ 216 ಜನ ಸಾವಿಗೀಡಾಗಿದ್ದಾರೆ.
ಸೋಮವಾರ ವಿಜಯಪುರ ನಗರವೊಂದರಲ್ಲೇ 153 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ವಿಜಯಪುರ ಗ್ರಾಮೀಣ 21, ಮುದ್ದೇಬಿಹಾಳ 56, ಸಿಂದಗಿಯಲ್ಲಿ 31 ಹಾಗೂ ಬಬಲೇಶ್ವರದಲ್ಲಿ ಒಂಬತ್ತು ಸೇರಿದಂತೆ ಜಿಲ್ಲೆಯಲ್ಲಿ 308 ಜನರಿಗೆ ಕೋವಿಡ್ ದೃಢವಾಗಿದೆ.
ತೀವ್ರ ಉಸಿರಾಟದ ತೊಂದರೆ, ಐಎಲ್ಐ ಸಂಬಂಧಿ ಕಾಯಿಲೆಗಳಿಂದ ಬಳಲಿ, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಕೋವಿಡ್ ಸೋಂಕಿತ 68 ವರ್ಷ ವಯೋಮಾನದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣ ದಾಖಲು:
ಕೋವಿಡ್ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿಷೇಧಾಜ್ಞೆ ನಡುವೆಯೂ ಭಾನುವಾರ ಸಿಂದಗಿ ತಾಲ್ಲೂಕಿನ ಮಲಘಾಣದಲ್ಲಿ ಜಡೆ ಶಾಂತಲಿಂಗೇಶ್ವರ ಜಾತ್ರೆ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಜಾತ್ರಾ ಕಮಿಟಿ ಹಾಗೂ ಗ್ರಾಮದ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.