ತಿಕೋಟಾ: ಕಳೆದ ನಾಲ್ಕೈದು ವರ್ಷಗಳಿಂದ ಮಳೆಯ ಅಭಾವ, ನೀರಿನ ಬರ ಅನುಭವಿಸದ ರೈತರಿಗೆ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಬಿತ್ತನೆ ಕಾರ್ಯ ಆಗಿಲ್ಲ. ಅಲ್ಲದೇ, ಕಬ್ಬು, ದಾಳಿಂಬೆ, ದ್ರಾಕ್ಷಿ, ರೇಷ್ಮೆ ಬೆಳೆಗಳೂ ನೀರಿಲ್ಲದೇ ಒಣಗುತ್ತಿವೆ.
ತಿಕೋಟಾ ಹಾಗೂ ಬಬಲೇಶ್ವರ ತಾಲ್ಲೂಕುಗಳಲ್ಲಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಬೆಳೆದ ಕಬ್ಬು ಒಣಗಿ ನಿಂತಿವೆ. ಬೇಸಿಗೆ ಚಾಟ್ನಿ (ಕಟಾವು) ಮಾಡಿದ ನಂತರ ಬೆಳೆಯುತ್ತಿರುವ ದ್ರಾಕ್ಷಿ ಪಡದ ಕಡ್ಡಿಗಳು ನೀರಿನ ಅಭಾವದಿಂದ ಗಟ್ಟಿಯಾಗಿ ಬೆಳೆಯುತ್ತಿಲ್ಲ. ರೇಷ್ಮೆ ಹಾಗೂ ದಾಳಿಂಬೆ ಬೆಳೆ ಸಹ ಒಣಗುತ್ತಿವೆ.
ಬೆಳೆ ಉಳಿಸಲು ಟ್ಯಾಂಕರ್ ಮೊರೆ:
ತಪ್ಪಲು ಬಾಡಿ ಒಣಗಿ ಹೋಗುತ್ತಿರುವ ದ್ರಾಕ್ಷಿ ಪಡಗಳನ್ನು ಉಳಿಸಲು ದ್ರಾಕ್ಷಿ ಬೆಳೆಗಾರರು ಬಾಡಿಗೆ ನೀರಿನ ಟ್ಯಾಂಕರ್ಗಳಿಂದ ದೂರದ ಪ್ರದೇಶಗಳಿಂದ ನೀರನ್ನು ತಂದು ಕೃಷಿ ಹೊಂಡದಲ್ಲಿ ಹಾಕಿ ಬೆಳೆಗಳಿಗೆ ಹನಿ ನೀರಾವರಿ ಮೂಲಕ ನೀರು ಪೂರೈಸಿ ಬೆಳೆ ಉಳಿಸಿಕೊಳ್ಳುವ ಹರಸಾಹಸ ಮಾಡುತ್ತಿದ್ದಾರೆ.
ದನಕರಗಿಗೆ ಮೇವಿನ ಅಭಾವ:
ಬೆಳೆಯಷ್ಟೇ ಅಲ್ಲದೇ, ನೀರಿನ ಅಭಾವದಿಂದ ದನಕರುಗಳಿಗೆ ಮೇವಿನ ಅಭಾವ ಎದುರಾಗಿದೆ. ನೀರಿಲ್ಲದೇ ಕೃಷ್ಣಾ ನದಿಯ ದಡದಲ್ಲಿರುವ ಕಬ್ಬು ಬೆಳೆ ಸಹ ಒಣಗುತ್ತಿದೆ. ತಿಕೋಟಾ ಭಾಗದ ರೈತರು ನದಿ ದಡದಲ್ಲಿ ಒಣಗಿ ನಿಂತಿರುವ ಕಬ್ಬನ್ನು ದನಕರಗಳ ಮೇವಿಗಾಗಿ ಟನ್ಗೆ ₹ 3000 ದಿಂದ ₹ 4 000 ಹಾಗೂ ಟ್ರ್ಯಾಕ್ಟರ್ ಬಾಡಿಗೆ ₹ 5000 ಖರ್ಚು ಮಾಡಿ ಖರೀದಿಸುತ್ತಿದ್ದಾರೆ. ಬರಗಾಲ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿ ಗೋ ಶಾಲೆ ತೆರೆಯುವಂತೆ ರೈತರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
ಒಣಗುತ್ತಿರುವ ದ್ರಾಕ್ಷಿ ಬೆಳೆಗೆ ದೂರದಿಂದ ಬಾಡಿಗೆ ಟ್ರ್ಯಾಕ್ಟರ್ ಮೂಲಕ ನೀರು ತಂದು ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ರೈತರ ಕಷ್ಟ ಕೇಳುವವರೇ ಇಲ್ಲ.-ಹಣಮಂತ ಜೊತೆಪ್ಪ ಖವಿ, ದ್ರಾಕ್ಷಿ ಬೆಳೆಗಾರ ಘೋಣಸಗಿ
ಇರುವ ಕಬ್ಬಿನ ಬೆಳೆ ಸಂಪೂರ್ಣ ಒಣಗಿ ಹೋಗಿದೆ. ಸಾಲ ಮಾಡಿ ಖರ್ಚು ಮಾಡಿದ ಬೆಳೆ ಒಣಗಿ ನಿಂತಿದೆ. ಹಾಳಾದ ಬೆಳೆಗೆ ಸರ್ಕಾರ ಪರಿಹಾರ ನೀಡಬೇಕು.-ವನಿತಾ ಮೇಡೆಗಾರ, ರೈತ ಮಹಿಳೆ ಕಳ್ಳಕವಟಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.