ವಿಜಯಪುರ: ಬೇನಾಳ ಗ್ರಾಮದ ಹಿಂದುಳಿದ ಬಡವರಿಗೆ ಬಗರ್ಹುಕುಂ ಹಕ್ಕು ಪತ್ರ ಮತ್ತು ಸಾಗುವಳಿ ಚೀಟಿ ಒದಗಿಸಲು ಒತ್ತಾಯಿಸಿ ಕರ್ನಾಟಕ ರೈತ ಪ್ರಾಂತ ಸಂಘ, ಜನವಾದಿ ಮಹಿಳಾ ಸಂಘ ಮತ್ತು ಭಾರತೀಯ ದಲಿತ ಪ್ಯಾಂತರ್ಸ್ ವತಿಯಿಂದ ಜಿಲ್ಲಾಧಿಕಾರಿ ವಿಜಯಮಹಾಂತೇಶ ಅವರಿಗೆ ಮನವಿ ಸಲ್ಲಿಸಲಾಯಿತು.
ನಿಡುಗುಂದಿ ತಾಲ್ಲೂಕಿನ ಬೇನಾಳ ಗ್ರಾಮದಲ್ಲಿ ಸರ್ಕಾರದ ಒಡೆತನದಲ್ಲಿರುವ ಬೇನಾಳ ಗ್ರಾಮದ ಸರ್ವೇ ನಂಬರ 221ರ ಪೈಕಿ 109 ಎಕರೆ 34 ಗುಂಟೆ ಹಾಗೂ ವಂದಾಲ ಗ್ರಾಮದ ಸರ್ವೇ ನಂಬರ್ 310 ‘ಅ’ ದರಲ್ಲಿ ಮತ್ತು 309ರ ಸರ್ವೇ ನಂಬರ್ನಲ್ಲಿರುವ ಜಮೀನು ಭೂ ರೈತ ದಲಿತ ಜನಾಂಗಕ್ಕೆ ಮತ್ತು ಹಿಂದುಳಿದ ಬಡವರಿಗೆ ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಬೇನಾಳ ಗ್ರಾಮದಲ್ಲಿ ಅರಣ್ಯ ಭೂಮಿಯನ್ನು ರವಿ ಕೃಷ್ಣಪ್ಪ ರಾಠೋಡ ಬೇನಾಳ, ತಾಂಡಾ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಸದ್ಯ ಸಾಗುವಳಿ ಮಾಡುಲು ಹೋದಾಗ ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸಿದ್ದಾರೆ. ಇದನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.