ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಯರ ಶಿಷ್ಯವೇತನ ಕಡಿತ ಮಾಡಿರುವುದನ್ನು ವಿರೋಧಿಸಿಡೆಮಾಕ್ರಟಿಕ್ ರಿಸರ್ಚ್ ಸ್ಕಾಲರ್ಸ್ ಆರ್ಗನೈಸೇಷನ್ (ಡಿಆರ್ಎಸ್ಒ) ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.
ಡಿಆರ್ಎಸ್ಒ ಸದಸ್ಯೆ ಗೀತಾ.ಎಚ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಹಂತದಲ್ಲಿರುವಾಗ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿನಿಯರ ಶಿಷ್ಯವೇತನವನ್ನು ₹15 ಸಾವಿರದಿಂದ ₹8 ಸಾವಿರಕ್ಕೆ ಕಡಿತಗೊಳಿಸಿದ್ದಾರೆ ಹಾಗೂ ಪ್ರಗತಿ ವರದಿ ಶುಲ್ಕವನ್ನು ಕೂಡ ಹೆಚ್ಚಿಸಿದ್ದಾರೆ ಎಂದು ಆರೋಪಿಸಿದರು.
ಸಂಶೋಧನಾ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯವಿಲ್ಲ. ಇದ್ದರೂ ಅದರ ಶುಲ್ಕ ಕೂಡ ಜಾಸ್ತಿಯಾಗಿದೆ. ಹಾಗೂ ಐದು ತಿಂಗಳಿಂದ ಶಿಷ್ಯವೇತನವನ್ನು ನೀಡಿಲ್ಲ. ಈ ರೀತಿಯಾದರೆ ವಿದ್ಯಾರ್ಥಿನಿಯರು ಸಂಶೋಧನೆಯನ್ನು ಅರ್ಧಕ್ಕೆ ಕೈಬಿಡಬೇಕಾಗಿದೆ ಎಂದು ದೂರಿದರು.
ಕರ್ನಾಟಕದಲ್ಲಿ ಇರುವುದು ಏಕೈಕ ಮಹಿಳಾ ವಿಶ್ವವಿದ್ಯಾನಿಲಯ. ಸಾಕಷ್ಟು ವಿದ್ಯಾರ್ಥಿನಿಯರು ಬಡತನದಿಂದಲೇ ಸಂಶೋಧನೆಗೆ ಬರುತ್ತಾರೆ. ಆದ್ದರಿಂದ ಈ ಕೂಡಲೇ ನಿಗದಿಪಡಿಸಿದ ಶಿಷ್ಯವೇತನವನ್ನು ಬಿಡುಗಡೆಮಾಡಬೇಕು ಹಾಗೂ ಹಾಸ್ಟಲ್ ಸಮಸ್ಯೆ ಮತ್ತು ಪ್ರಗತಿ ವರದಿ ಶುಲ್ಕವನ್ನು ಕೂಡ ಕಡಿಮೆಮಾಡಬೇಕು ಎಂದು ಆಗ್ರಹಿಸಿದರು.