ವಿಜಯಪುರ: ‘ನಿಮ್ಮ ಬದುಕಿನ ಜವಾಬ್ದಾರಿ ನೀವೇ ತೆಗೆದುಕೊಳ್ಳಿ. ಸರಿಯಾದ ಗುರಿ ಇಟ್ಟುಕೊಳ್ಳಿ, ನಿಮ್ಮ ಶಕ್ತಿ, ಸಾಮರ್ಥ್ಯವನ್ನು ಅರ್ಥೈಸಿಕೊಳ್ಳಿ, ಗುರಿಯಷ್ಟೇ ಪರಿಶ್ರಮವೂ ಮಹತ್ವದ್ದು ಎಂಬುದನ್ನು ಮರೆಯಬೇಡಿ’ ಎಂದು ಧಾರವಾಡದ ಮನೋವೈದ್ಯ ಡಾ.ಆದಿತ್ಯ ಪಾಂಡುಂರಗಿ ಹೇಳಿದರು.
‘ಓದಿನಲ್ಲಿ ಆಸಕ್ತಿ ತಾನಾಗಿಯೇ ಬರುವುದಿಲ್ಲ; ನೀವು ಆಸಕ್ತಿ ತೆಗೆದುಕೊಳ್ಳಬೇಕು. ದುಶ್ಚಟ, ಮೊಬೈಲ್ ಮತ್ತು ಬೈಕ್ನಿಂದ ದೂರ ಇರಬೇಕು. ಆಕರ್ಷಣೆಗೆ ಒಳಗಾಗಬಾರದು. ಸತತ, ನಿರಂತರ, ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು. ಅಂಕಗಳು ನಮ್ಮ ಬದುಕಿಗೆ ಮಾನದಂಡವಾಗಬಾರದು. ಅಂಕಗಳಿಗಿಂತ ಬದುಕು ದೊಡ್ಡದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ವಿಷಯ ಗ್ರಹಿಕೆಗಾಗಿ ಪುಸ್ತಕ ಓದಿದರೆ, ಓದಿದ್ದು ನೆನಪಿನಲ್ಲಿ ಉಳಿಯುತ್ತದೆ. ಅಂಕ ಗಳಿಕೆಗಾಗಿ ಓದಿದರೆ, ನೆನಪಿನಲ್ಲಿ ಉಳಿಯುವುದಿಲ್ಲ. ಜೀವನದಲ್ಲಿ ಒತ್ತಡ ಬೇಕೇಬೇಕು. ಒತ್ತಡ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಆದರೆ, ಆ ಒತ್ತಡವನ್ನು ನಿರ್ವಹಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಏಕಾಗ್ರತೆ, ಸಮಚಿತ್ತ, ಬದ್ಧತೆ, ಒಳ್ಳೆಯ ನಡತೆಯನ್ನು ಹೊಂದಿದ್ದರೆ ಖಂಡಿತ ಗುರಿಯನ್ನು ತಲುಪುತ್ತೀರಿ’ ಎಂದು ತಿಳಿಸಿದರು.
ಸುಜನ್, ನಿವೇದಿತಾ, ಶುಬೋಧ, ದೀಪಾ ಪವಾರ, ಮಂಜುನಾಥ, ನಿಖಿತಾ, ಸೃಜನಾ ಪಾಟೀಲ, ಅರ್ಪಿತಾ ಕುಲಕರ್ಣಿ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದರು. ವಿದ್ಯಾರ್ಥಿಗಳ ಮನದಲ್ಲಿನ ದುಗುಡ, ಆತಂಕ, ಗೊಂದಲಗಳನ್ನು ದೂರ ಮಾಡಿದರು.