ವಿಜಯಪುರ: ಅಂಬುಲೆನ್ಸ್, ಪೊಲೀಸ್ ಮತ್ತು ಅಗ್ನಿಶಾಮಕ ತುರ್ತು ಸೇವೆಗಳನ್ನು ಪಡೆಯಲು ಜಿಲ್ಲೆಯ ಜನರು 112 ಸಹಾಯವಾಣಿ ಸಂಖ್ಯೆಗೆ(ಇಆರ್ಎಸ್ಎಸ್) ಕರೆ ಮಾಡಿದರೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಸಹಾಯ ಮಾಡಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ತಿಳಿಸಿದರು.
ಇಆರ್ಎಸ್ಎಸ್ ಒಂದು ರೀತಿ ಮೊಬೈಲ್ ಪೊಲೀಸ್ ಠಾಣೆ ಇದ್ದಂತೆ. ಕರೆ ಮಾಡಿದ 15 ನಿಮಿಷದೊಳಗೆ ನಿಗದಿತ ಸ್ಥಳಕ್ಕೆ ಪೊಲೀಸ್ ವಾಹನ ಹಾಜರಾಗಿ, ಅಗತ್ಯ ನೆರವು ಮತ್ತು ತ್ವರಿತ ಪರಿಹಾರ ಒದಗಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ 12ಇಆರ್ಎಸ್ಎಸ್ ವಾಹನಗಳಿವೆ. ಈ ಸೇವೆ ಆರಂಭವಾಗಿ ಆರೇಳು ತಿಂಗಳಾದರೂ ಜಿಲ್ಲೆಯ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿಲ್ಲ ಎಂದು ಹೇಳಿದರು.