ಆಲಮೇಲ (ವಿಜಯಪುರ): ಸಮೀಪದ ಗುಂದಗಿ ಗ್ರಾಮದ ರೈತರೊಬ್ಬರ ಹೊಲದಲ್ಲಿ ಬೆಳೆದ ಬದನೆ ಮತ್ತು ಹೀರೆಕಾಯಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗದೇ ಮಾರಾಟವಾಗದ ಕಾರಣ ಹೊಲದಲ್ಲೇ ಕೊಳೆಯುತ್ತಿದೆ.
‘ಎರಡು ಎಕರೆಯಲ್ಲಿ ₹ 75 ಸಾವಿರ ಖರ್ಚು ಮಾಡಿ ಬೆಳೆದಿದ್ದ ಹಿರೇಕಾಯಿಗೆ ಯೋಗ್ಯ ದರ ಸಿಗದೇ, ಮಾರುಕಟ್ಟೆಗೆ ಸಾಗಿಸಲೂ ಸಾಧ್ಯವಾಗದೇ ಬೇಸತ್ತು ಟ್ರಾಕ್ಟರ್ ಸಹಾಯದಿಂದ ಬುಡಸಮೇತ ಕಿತ್ತುಹಾಕಿದೆ’ ಎಂದು ಶೋಭಾ ಅಣ್ಣಾರಾವ್ ಪಾಟೀಲ ‘ಪ್ರಜಾವಾಣಿ’ ಬಳಿ ತಮ್ಮ ನೋವು ತೋಡಿಕೊಂಡರು.
‘1.5 ಎಕರೆಯಲ್ಲಿ ₹ 70 ಸಾವಿರ ಖರ್ಚು ಮಾಡಿ ಬೆಳೆದ ಬದನೆಕಾಯಿ ಸ್ಥಿತಿಯೂ ಇದೇ ಆಗಿದೆ. ಮಾರಾಟವಾಗದೇ ಹೊಲದಲ್ಲಿಯೇ ಕೊಳೆಯುತ್ತಿರುವುದರಿಂದ ಅದನ್ನು ಇಷ್ಟರಲ್ಲಿಯೇ ಕಿತ್ತುಹಾಕಲಿದ್ದೇನೆ’ ಎಂದು ಪಾಟೀಲ ಹೇಳಿದರು.
‘ಬೇರೆಯವರ ಜಮೀನಿನಿಂದ 2 ಕಿ.ಮೀ ದೂರದಿಂದ ಪೈಪ್ ಲೈನ್ ಮೂಲಕ ನೀರು ತಂದು, ಕೃಷಿ ಹೊಂಡದಲ್ಲಿ ನೀರು ಸಂಗ್ರಹಿಸಿ ಕೃಷಿ ಮಾಡಿದ್ದೇನೆ. ಈ ಬೇಸಿಗೆಯಲ್ಲೂ ಉತ್ತಮ ಬೆಳೆಯೂ ಬಂದಿತ್ತು ಆದರೆ, ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದು, ತೊಂದರೆಗೀಡುಮಾಡಿತು’ ಎಂದು ಪಾಟೀಲ ಬೇಸರ ವ್ಯಕ್ತಪಡಿಸಿದರು.
‘ಕನಿಷ್ಟ ಎರಡೂ ಬೆಳೆಯಿಂದ ₹4 ಲಕ್ಷ ಆದಾಯ ನಿರೀಕ್ಷೆ ಮಾಡಿದ್ದೆವು. ಆದರೆ, ನಮ್ಮ ಶ್ರಮ ನೀರಲ್ಲಿ ಹೋಮ ಮಾಡಿದಂತಾಯಿತು. ಕೃಷಿ ಹೊಂಡ ಸೇರಿದಂತೆ ₹ 5 ಲಕ್ಷ ಹಣ ಖರ್ಚು ಮಾಡಿದ್ದೆ. ಒಳ್ಳೆಯ ಬೆಲೆ ಸಿಗುತ್ತದೆ ಎಂದು ನಂಬಿದ್ದ ನಮಗೆ ಈ ಕೊರೊನಾ ಸಂಕಟಕ್ಕೀಡು ಮಾಡಿದೆ’ ಎಂದು ತಮ್ಮ ಅಳಲು ತೋಡಿಕೊಂಡರು.