ಗಡಿಭಾಗದ ಪತ್ರಿಕೆಗಳಿಗೆ ಆರ್ಥಿಕ ಸಹಕಾರ: ಸೋಮಶೇಖರ

ವಿಜಯಪುರ: ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಗಡಿ ಭಾಗದ ಮಾಧ್ಯಮಗಳಿಗೆ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು.
‘ಗಡಿ ಭಾಗದಲ್ಲಿ ಮಾಧ್ಯಮ’ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಗಡಿಭಾಗದ ಪತ್ರಿಕೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅದನ್ನು ಪರಿಹರಿಸುವ ಕೆಲವನ್ನು ಸರ್ಕಾರ ಮಾಡಬೇಕು ಎಂದರು.
ರಾಜ್ಯದ ಗಡಿ ಭಾಗದ ಮಾಧ್ಯಮಗಳು ಗಡಿಭಾಗದ ಭಾಷೆ, ಸಂಸ್ಕೃತಿಗಳ ಸಾಮರಸ್ಯಗಳನ್ನು ಕಾಪಾಡಿಕೊಂಡು ಸಾಗುವ ಕಾರ್ಯ ಮಾಡಬೇಕು ಎಂದರು.
ಗಡಿಭಾಗದಲ್ಲಿನ ಕನ್ನಡ ಪತ್ರಿಕೆಗಳ ಪ್ರಸಾರದ ಸಂಖ್ಯೆಗಳ ಸಮೀಕ್ಷೆಯನ್ನು ಕಾರ್ಯನಿರತ ಪತ್ರಕರ್ತ ಸಂಘದ ಸಹಯೋಗದಲ್ಲಿ ಗಡಿ ಪ್ರಾಧಿಕಾರ ಮಾಡಲಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಬಿ.ಎಂ ಹನೀಫ್ ಮಾತನಾಡಿ, ಗಡಿ ಭಾಷೆ ಅಥವಾ ಪ್ರಾದೇಶಿಕ ಭಾಷಾ ವೈಶಿಷ್ಟ್ಯತೆಯಿಂದಾಗಿ ನವ ತಂತ್ರಜ್ಞಾನಗಳು ಬಂದರೂ ಅವುಗಳಿಗೆ ಯಾವುದೇ ಪೆಟ್ಟು ನೀಡುವುದಿಲ್ಲ. ನವ ಮಾಧ್ಯಮಗಳನ್ನು ಅಳವಡಿಸಿಕೊಂಡು ಮುದ್ರಣ ಮಾಧ್ಯಮಗಳು ಸಾಗಬೇಕಿದೆ ಎಂದರು.
ದೊಡ್ಡ ಮಾಧ್ಯಮವಾಗಲಿ ಅಥವಾ ಯುಟ್ಯೂಬ್ ಮಾಧ್ಯಮಗಳಿಂದ ಪ್ರತಿಯೊಬ್ಬರಿಗೂ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಸಿಕ್ಕಿದೆ. ಅದನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡಬಾರದು ಎಂದರು.
ಕೀರ್ತಿ ಕಾಸರಗೋಡು ಮಾತನಾಡಿ, ಗಡಿಭಾಗದ ಮಾಧ್ಯಮ ಪ್ರತಿನಿಧಿಗಳಲ್ಲಿ ಸೂಕ್ಷ್ಮ ಸಂವೇದನೆ ಇರಬೇಕು. ಗಡಿಭಾಗದ ಜನರು ಪಕ್ಕದ ರಾಜ್ಯದ ಕೆಲವು ಊರುಗಳಿಗೆ ಅವಲಂಬಿತರಾಗಿರುತ್ತಾರೆ. ಗಡಿ ವಿವಾದಗಳು ಆಗುವ ಸಮಯದಲ್ಲಿ ಸತ್ಯಾಸತ್ಯತೆಗಳನ್ನು ಖಚಿತಪಡಿಸಿಕೊಂಡು ವರದಿಗಳನ್ನು ಮಾಡಬೇಕು ಎಂದು ಹೇಳಿದರು.
ಗಡಿಭಾಗದ ಕಟ್ಟಗಡೆಯ ಹಳ್ಳಿಗಳಿಗೂ ಸೌಲಭ್ಯ ಸಿಗುವಂತೆ ಮಾಡುವ ಜವಾಬ್ದಾರಿ ಗಡಿ ಮಾಧ್ಯಮಗಳದ್ದಾಗಿದೆ ಎಂದರು.
ಪತ್ರಕರ್ತ ಕುಂದೂರು ಉಮೇಶ ಭಟ್ ಮಾತನಾಡಿ, ಗಡಿನಾಡು ಪತ್ರಕರ್ತರಿಗೆ ಕಾರ್ಯಾಗಾರ, ಫೆಲೋಶಿಪ್ ಕೊಡುವ ಕೆಲಸವನ್ನು ಮಾಧ್ಯಮ ಅಕಾಡೆಮಿ ಮಾಡಬೇಕು. ಗಡಿ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದರು.
ಮಾಧ್ಯಮ ಅಕಾಡಮಿ ಅಧ್ಯಕ್ಷ ಸದಾಶಿವ ಶೆಣೈ, ಹಿರಿಯ ಪತ್ರಕರ್ತರಾದ ಅಪ್ಪಾರಾವ್ ಸೌದಿ, ಸವಿತಾ ಜಯಂತ, ವೆಂಕಟಸಿಂಗ್ ಮಾತನಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.