ಸಿಂದಗಿ (ವಿಜಯಪುರ): ತಾಲ್ಲೂಕಿನ ಸುಂಗಠಾಣ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೊಲ್ಲಾಳಪ್ಪ ಬಸಲಿಂಗಪ್ಪ ಹದಗಲ್ಲ (35) ಅವರ ಕತ್ತು ಕುಯ್ದು ಬುಧವಾರ ಮಧ್ಯಾಹ್ನ ಪಟ್ಟಣದಲ್ಲಿ ಕೊಲೆ ಮಾಡಲಾಗಿದೆ.
ಹದಗಲ್ಲ ಅವರು ತಾಲ್ಲೂಕಿನ ಮುರಡಿ ಗ್ರಾಮದವರು. ಗ್ರಾ.ಪಂ. ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಖಾನಾವಳಿಯಲ್ಲಿ ಊಟ ಮಾಡುತ್ತಿದ್ದಾಗ ಬಂದ ಅಪರಿಚಿತರು ಕಣ್ಣಿಗೆ ಕಾರದ ಪುಡಿ ಎರಚಿ, ಅವರನ್ನು ಆಚೆ ಎಳೆದೂಯ್ದು ಜನರ ಎದುರೇ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮೊದಲ ಹೆಂಡತಿಯಿಂದ ದೂರ ಇದ್ದ ಹದಗಲ್ಲ ಅವರು ಬೇರೊಬ್ಬ ಮಹಿಳೆ ಜೊತೆ ಸಂಬಂಧ ಇರಿಸಿಕೊಂಡಿದ್ದರು ಎನ್ನಲಾಗಿದೆ. ಇದು ಕೊಲೆಗೆ ಕಾರಣವಾಗಿರಬಹುದೇ ಎಂಬ ಸಂಶಯದಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಆರೋಪಿಗಳು ಯಾರೆಂಬುದು ತಿಳಿದು ಬಂದಿಲ್ಲ.