ವಿಜಯಪುರ: ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ಸಂಬಂಧಲ್ಲಿ ಪ್ರಾಮಾಣಿಕ ಕೃಷಿಕನಿಗೆ ಹಾಗೂ ಜಾನುವಾರು ಸಾಗಾಣಿಕೆದಾರರಿಗೆ ಯಾವುದೇ ತೊಂದರೆಯಾಗಬಾರದು ಮತ್ತು ಕಾಯ್ದೆ ಉಲ್ಲಂಘನೆಯಾಗಬಾರದು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪ್ರಾಣಿ ದಯಾ ಸಂಘದ ಅಧ್ಯಕ್ಷರೂ ಆದ ಪಿ.ಸುನೀಲ್ ಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.
ಗೋಮಾಂಸ ಎಂದರೆ ಎಲ್ಲ ವಯಸ್ಸಿನ ಆಕಳು, ಕರು, ಗೂಳಿ ಮತ್ತು ಎತ್ತು ಹಾಗೂ 13 ವರ್ಷ ವಯಸ್ಸಿನ ಕೋಣ, ಎಮ್ಮೆಗಳು ಒಳಪಡುತ್ತವೆ. ಹತ್ಯೆಗಾಗಿ ಜಾನುವಾರುಗಳನ್ನು ಮಾರಾಟ, ಖರೀದಿ ಮಾಡುವಂತಿಲ್ಲ ಎಂದು ತಿಳಿಸಿದರು.
ಹತ್ಯೆ ಮಾಡಲು ಯೋಗ್ಯ ಎಂದು ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಪಶು ವೈದ್ಯಾಧಿಕಾರಿಗಳು ಪ್ರಾಮಾಣೀಕರಿಸದ ಜಾನುವಾರುಗಳನ್ನು ಮಾತ್ರ ಖರೀದಿ, ಮಾರಾಟ ಮಾಡಲು ಅವಕಾಶವಿರುತ್ತದೆ. ಯಾವುದೇ ಜಾನುವಾರುಗಳಿಗೆ ಸಾಂಕ್ರಾಮಿಕ ಮತ್ತು ಮಾರಕ ರೋಗಗಳು ಕಂಡುಬಂದಲ್ಲಿ ಆ ವ್ಯಾಪ್ತಿಗೆ ಬರುವ ಪಶು ವೈದ್ಯಾಧಿಕಾರಿಗಳು ಪ್ರಾಮಾಣೀಕರಿಸಬೇಕು ಎಂದು ಅವರು ಹೇಳಿದರು.
ವಿಜಯಪುರ ನಗರದಲ್ಲಿ ಸಂಚರಿಸುವ ಬಿಡಾಡಿ ದನಗಳ ನಿಯಂತ್ರಣ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುವ ಜಾನುವಾರುಗಳನ್ನು ಪರೀಕ್ಷಿಸಿ ಖರೀದಿ ಮಾಡುವವರು ಕಡ್ಡಾಯವಾಗಿ ಕಿವಿ ಓಲೆ ಅಳವಡಿಸಿ, ಜಾನುವಾರು ಮಾತ್ರ ಸಂತೆಯಲ್ಲಿ ಮಾರುವಂತೆ ಕೃಷಿ ಮಾರುಕಟ್ಟೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಶು ವೈದ್ಯರು ಎಲ್ಲ ಜಾನುವಾರುಗಳಿಗೆ ಕಿವಿ ಓಲೆ ಅಳವಡಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಗೋ ಹತ್ಯೆ ಸಂಬಂಧಿಸಿದ ಪ್ರಸಂಗದಲ್ಲಿ ಆಹಾರ ಸುರಕ್ಷಾ ಅಧಿಕಾರಿಗಳು ಮಾಂಸದ ಪರೀಕ್ಷೆ ಹಾಗೂ ಅದರ ಮೂಲವನ್ನು ಕಂಡು ಹಿಡಿಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ಸಾರಿಗೆ ಇಲಾಖೆಯ ಚೆಕ್ಪೋಸ್ಟ್ಗಳಲ್ಲಿ ಇತರ ರಾಜ್ಯಗಳಿಂದ ಬರುವ ಜಾನುವಾರುಗಳ ಸಾಗಾಣಿಕೆ ವಾಹನಗಳ ಮೇಲೆ ನಿಗಾವಹಿಸಿ ಕಾನೂನು ಉಲ್ಲಂಘನೆ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಪೊಲೀಸರು ಗೋಹತ್ಯೆ ತಡೆಯಲು ಎಲ್ಲ ರೀತಿಯ ಸಹಕಾರ ನೀಡಬೇಕು ಮತ್ತು ಕಾನೂನು ಉಲ್ಲಂಘನೆ ಮಾಡಿದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ನೀಡುವ ನಿರ್ದೇಶನದನ್ವಯ ಪ್ರಾಣಿ ಕಲ್ಯಾಣ ಕಾರ್ಯಕ್ರಮದಲ್ಲಿ ತೊಡಗಿದ ಎಲ್ಲರು ವಾಟ್ಸ್ಆ್ಯಪ್ ಗ್ರೂಪ್ ಮಾಡಬೇಕು ಎಂದು ತಿಳಿಸಿದರು.
ಕಗ್ಗೋಡಿನ ಶ್ರೀ ಸಿದ್ಧೇಶ್ವರ ಸಂಸ್ಥೆಯ ರಾಮನಗೌಡ ಪಾಟೀಲ್ ಯತ್ನಾಳ ಗೋರಕ್ಷಕ ಕೇಂದ್ರ ಹಾಗೂ ಭೂತನಾಳ ಮತ್ತು ಯಲಗೂರಿನ ಶ್ರೀ ಪ್ರಮೋದಾತ್ಮಕ ಗೋ ರಕ್ಷಣಾ ಕೇಂದ್ರಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು,ಜಾನುವಾರುಗಳನ್ನು ಸಂರಕ್ಷಿಸಲು ಈ ಗೋಶಾಲೆಗಳು ಬದ್ಧವಾಗಿದೆ ಎಂದು ಸಭೆಗೆ ಗೋಶಾಲೆ ಮುಖ್ಯಸ್ಥರು ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯ ಪ್ರಾಣಿದಯಾ ಸಂಘದ ಸದಸ್ಯರು, ಗೋ ಶಾಲೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.