ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಮಿಡಿಸಿವಿರ್ ಇಂಜಿಕ್ಷನ್‍: ಕೇಂದ್ರದಿಂದ ತಾರತಮ್ಯ: ಎಂ.ಬಿ.ಪಾಟೀಲ ಆರೋಪ

Last Updated 29 ಏಪ್ರಿಲ್ 2021, 16:30 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ರೆಮಿಡಿಸಿವಿರ್ ಇಂಜಿಕ್ಷನ್‍ನನ್ನು ಸರಬರಾಜು ಮಾಡದೇ ಕೇಂದ್ರ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ಮಾಜಿ ಸಚಿವ, ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.

ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯ ಹಿರಿಯ ವೈದ್ಯರ ಸಭೆ ನಡೆಸಿ, ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಇಂದು 40 ಸಾವಿರ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಛತ್ತೀಸಗಡದಲ್ಲಿ 15 ಸಾವಿರ, ಗುಜರಾತ್ ರಾಜ್ಯದಲ್ಲಿ 14 ಸಾವಿರ ಕೊರೊನಾ ರೋಗಿಗಳು ದಾಖಲಾಗಿದ್ದಾರೆ. ಆದರೆ, ಕೇಂದ್ರ ಸರ್ಕಾರ ರೆಮಿಡಿಸಿವಿವಿರ್ ಪೂರೈಕೆಯಲ್ಲಿ ಏಪ್ರಿಲ್‌ 21 ರಿಂದ ಎಪ್ರಿಲ್ 30ರವರೆಗೆ 10 ದಿನಗಳ ಅವಧಿಗೆ ಗುಜರಾತ್ ರಾಜ್ಯಕ್ಕೆ 1,63,559 ಹಾಗೂ ಛತ್ತೀಸಗಡ ರಾಜ್ಯಕ್ಕೆ 48,250 ಇಂಜೆಕ್ಷನ್‍ಗಳನ್ನು ಹಂಚಿಕೆ ಮಾಡಲಾಗಿದೆ, ಆದರೆ, ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಿರುವ ಕರ್ನಾಟಕಕ್ಕೆ ಕೇವಲ 25,352 ಇಂಜಕ್ಷನ್‍ಗಳನ್ನು ಮಾತ್ರ ನೀಡಲಾಗಿದೆ. ಈ ಅಂಕಿ-ಅಂಶಗಳನ್ನು ನೋಡಲಾಗಿ ರೆಮಿಡಿಸಿವಿರ್‌ ಹಂಚಿಕೆ, ಪೂರೈಕೆ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಪಾರದರ್ಶಕವಾಗಿಲ್ಲ ಎಂಬುದು ಮೇಲ್ನೊಟಕ್ಕೆ ಕಂಡುಬರುತ್ತಿದೆ. ಕಾರಣ ಪ್ರಧಾನಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಿ, ಈ ತಾರತಮ್ಯ ನಿವಾರಣೆ ಮಾಡಿ, ಬಳಲುತ್ತಿರುವ ರೋಗಿಗಳಿಗೆ ಔಷಧ ನೀಡಲು ಈ ಕೂಡಲೇ ನೆರವಾಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಧಾನಿಗಳಿಗೆ, ಕೇಂದ್ರ ಆರೋಗ್ಯ ಸಚಿವರಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ, ಆರೋಗ್ಯ ಸಚಿವರಿಗೆ ಟ್ವೀಟ್ ಮೂಲಕ ಗಮನ ಸೆಳೆಯಲಾಗುವುದು ಎಂದರು.

ಅತೀ ಕಡಿಮೆ ಶುಲ್ಕ ಪಡೆದು ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಬಿ.ಎಲ್.ಡಿ.ಇ ಆಸ್ಪತ್ರೆಗೆ ನಿನ್ನೆ 382 ಇಂಜೆಕ್ಷನ್‍ಗಳು ಬಂದಿದ್ದು, ನಿನ್ನೆಯೇ ಖಾಲಿಯಾಗಿವೆ. ಇಂದು 482 ಇಂಜೆಕ್ಷನ್‍ಗಳು ಬಂದಿವೆ. ಆದರೆ, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಇಂಜೆಕ್ಷನ್ ನೀಡಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಬಿ.ಎಲ್.ಡಿ.ಇ ಆಸತ್ರೆಯಲ್ಲಿ ಹೆಚ್ಚುತ್ತಿರುವ ರೋಗಿಗಳಿಗೆ ಆಕ್ಸಿಜನ್ ಪೂರೈಸಲು ಈಗಿರುವ 13 ಕೆ.ಎಲ್ ಸಾಮಾರ್ಥ್ಯದ ಆಕ್ಸಿಜನ್ ಘಟಕದ ಜೊತೆಗೆ ಹೆಚ್ಚುವರಿಯಾಗಿ ಇನ್ನೂ 13 ಕೆ.ಎಲ್. ಆಕ್ಸಿಜನ್ ಘಟಕವನ್ನು ಸ್ಥಾಪಿಸಲು ಇಂದಿನ ಸಭೆಯಲ್ಲಿ ನಿರ್ಣಯಸಲಾಗಿದ್ದು, ಮುಂದಿನ 15 ದಿನಗಳಲ್ಲಿ ಈ ಘಟಕವನ್ನು ಸ್ಥಾಪಿಸಲು ಯುದ್ದೋಪಾದಿಯಲ್ಲಿ ಕೆಲಸ ಮಾಡಿ, ಆಕ್ಸಿಜನ್ ಬೆಡ್‍ಗಳ ಕೊರತೆ ನಿವಾರಿಸಲಾಗುವುದು ಎಂದು ಹೇಳಿದರು.

ತುರ್ತಾಗಿ 100 ಜಂಬೋ ಆಕ್ಸಿಜನ್ ಸಿಲೆಂಡರ್‌ಗಳನ್ನು ಈಗಾಗಲೇ ತರಿಸಲಾಗಿದ್ದು, ಅವುಗಳು ಕೂಡ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಆಸ್ಪತ್ರೆಗೆ ನಿತ್ಯವೂ ಹೆಚ್ಚಿನ ರೋಗಿಗಳು ದಾಖಲಾಗಲು ಬರುತ್ತಿರುವ ಹಿನ್ನೆಯಲ್ಲಿ ಕೇವಲ ಅಗತ್ಯವಿರುವವರಿಗೆ ಮಾತ್ರ ಒಳರೋಗಿಯಾಗಿ ದಾಖಲೆ ಮಾಡಬೇಕು. ಮನೆಯಲ್ಲಿಯೇ ಆರೈಕೆಯಾಗುವವರನ್ನು ಆಸ್ಪತ್ರೆಗೆ ದಾಖಲಿಸಬಾರದು. ಇದರಿಂದ ಬೆಡ್‍ಗಳ ಕೊರತೆ ನೀಗಿಸಿ, ಅಗತ್ಯವಿರುವ ರೋಗಿಗಳಿಗೆ ಅನುಕೂಲವಾಗುವುದು. ದಾಖಲಾಗುವ ಒಳರೋಗಿಗಳಲ್ಲಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ನಂತರ ಅವರನ್ನು ದೀರ್ಘಾವಧಿವರೆಗೆ ಆಸ್ಪತ್ರೆಯಲ್ಲಿ ಅನಗತ್ಯವಾಗಿ ಇರಿಸದೇ ಬಿಡುಗಡೆ ಮಾಡಬೇಕು ಎಂದು ಸೂಚಿಸಿದರು.

ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ರೋಗಿಗಗಳ ಚಿಕಿತ್ಸೆಗೆ ಅನಕೂಲವಾಗಲು ಬಿ.ಎಲ್.ಡಿ.ಇ ಸಂಸ್ಥೆ ನರ್ಸಿಂಗ್ ಹಾಗೂ ಫಾರ್ಮಸಿ ಕಾಲೇಜಿನ ನುರಿತ ಸಿಬ್ಬಂದಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಯಿತು.

ಗುಣಮುಖರಾಗುತ್ತಿರುವ ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಫೀಜಿಯೋಥೆರಪಿ ಸೌಲಭ್ಯವನ್ನು ಆಸ್ಪತ್ರೆಯಲ್ಲಿ ಒದಗಿಸಲಾಗುತ್ತಿದ್ದು, ಇದರಿಂದ ಉತ್ತಮ ಫಲಿತಾಂಶ ಕಂಡುಬಂದಿದೆ ಎಂದು ಹೇಳಿದರು.

ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಸಮಕುಲಪತಿ ಡಾ.ಆರ್.ಎಸ್.ಮುಧೋಳ, ಬಿ.ಎಂ.ಪಾಟೀಲ್ ಪಾಟೀಲ್ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಆಸ್ಪತ್ರೆ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ರಿಜಿಸ್ಟ್ರಾರ್‌ ಡಾ.ಜೆ.ಜಿ.ಅಂಬೇಕರ್, ಸಂಸ್ಥೆ ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ, ಪ್ರಚಾರಾಧಿಕಾರಿ ಡಾ.ಮಹಾಂತೇಶ ಬಿರಾದಾರ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT