ವಿಜಯಪುರ: ಪಾಲಿಕೆ ವ್ಯಾಪ್ತಿಯಲ್ಲಿ ಜಲಮಂಡಳಿಯಿಂದ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಲು ಅಗೆದಿರುವ ರಸ್ತೆಯನ್ನುಸಮರೋಪಾದಿಯಲ್ಲಿ ಪುನರ್ ನಿರ್ಮಿಸಲುಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಹಾನಗರಪಾಲಿಕೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 531 ಕಿ.ಮೀ ನಷ್ಟು ರಸ್ತೆಯನ್ನು ಅಗೆದಿದ್ದು, ಸುಮಾರು 176 ಕೀ.ಮೀ ರಸ್ತೆಯನ್ನು ಪುನರ್ ನಿರ್ಮಿಸಿದ್ದು, ಉಳಿದ ರಸ್ತೆಯನ್ನು ಶೀಘ್ರ ಪೂರ್ಣಗೊಳಿಸಲು ಜಲಮಂಡಳಿಕಾರ್ಯಪಾಲಕ ಎಂಜಿನಿಯರ್ಗೆ ತಿಳಿಸಿದರು.
ಮಹಾನಗರ ಪಾಲಿಕೆಯಲ್ಲಿ ಬಾಕಿ ಇರುವ ಆಸ್ತಿ ತೆರಿಗೆಯನ್ನು ಫೆಬ್ರುವರಿ ಅಂತ್ಯದೊಳಗೆ ಸಂಪೂರ್ಣ ವಸೂಲಿ ಮಾಡಬೇಕು, ಅಭಿವೃದ್ಧಿಗೆ ಸಹಕರಿಸಬೇಕು. ಪ್ರಚಾರ ತೆರಿಗೆ ವಸೂಲಿ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿನ ಉದ್ದಿಮೆದಾರರು ಉದ್ದಿಮೆ ಪರವಾನಗಿ ಪಡೆದುಕೊಂಡು ಉದ್ದಿಮೆ ನಡೆಸಬೇಕು. ಉದ್ದಿಮೆ ಪರವಾನಗಿ ಪಡೆಯದವರ ಪಟ್ಟಿ ತಯಾರಿಸಿ, ದಂಡದೊಂದಿಗೆ ಉದ್ದಿಮೆ ಪರವಾನಗಿ ನೀಡಲು ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಿದ ಕಟ್ಟಡಗಳನ್ನು ಅರ್ಹ ಫಲಾನುಭವಿಗಳಿಗೆ ಸೆಪ್ಟೆಂಬರ್ 23ರ ರೊಳಗೆ ಹಕ್ಕು ಪತ್ರ ವಿತರಿಸಿ, ಮನೆಗಳನ್ನು ಹಸ್ತಾಂತರಿಸಲು ತಿಳಿಸಿದರು.
ಈಗಾಗಲೇ 17 ವಾರ್ಡ್ಗಳಲ್ಲಿ ಮನೆಗಳಿಂದ ಹಸಿ ಕಸ ಮತ್ತು ಒಣ ಕಸ ವಿಂಗಡಣೆಯಾಗುತ್ತಿದ್ದು, ಇನ್ನೂ ಎಲ್ಲ ವಾರ್ಡಗಳಲ್ಲಿ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ಶೇ 100ರಷ್ಟು ವಿಲೇವಾರಿ ಮಾಡಲು ಪಾಲಿಕೆ ಪರಿಸರ ಎಂಜಿನಿಯರ್ಗೆ ಸೂಚಿಸಿದರು.
ಪಾಲಿಕೆ ಗುತ್ತಿಗೆದಾರರಿಗೆ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ₹18 ಕೋಟಿ ನೀಡುವುದು ಬಾಕಿ ಇದ್ದು, ಪಾಲಿಕೆಗೆ ಬರಬೇಕಾದಂತಹ ಆಸ್ತಿ ತೆರಿಗೆ, ಉದ್ದಿಮೆ ಪರವಾನಗಿ, ಪ್ರಚಾರ ತೆರಿಗೆ ಹಾಗೂ ಬೇರೆ ಮೂಲಗಳಿಂದ ಬರುವ ಆದಾಯವನ್ನು ವಸೂಲಿ ಮಾಡಿ, ಗುತ್ತಿಗೆದಾರರಿಗೆ ಹಂತ ಹಂತವಾಗಿ ಬಿಲ್ ಪಾವತಿಗೆ ಆಯುಕ್ತರಿಗೆ ಕ್ರಮ ವಹಿಸಲು ತಿಳಿಸಿದರು.
ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು, ಚಾಲಕರು ಮತ್ತು ಲೋಡರ್ಗಳಿಗೆ ಪಿ.ಎಫ್ ಮತ್ತು ಇ.ಎಸ್.ಐ ಮೊತ್ತವನ್ನು ನಿಗದಿತ ಅವಧಿಯೊಳಗೆ ಗುತ್ತಿಗೆದಾರರು ಪಾವತಿಸಬೇಕು. ತಪ್ಪಿದಲ್ಲಿ ಅಂತಹ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಆಯುಕ್ತರಿಗೆ ಸೂಚಿಸಿದರು.
ಪ್ರೊಬೆಷನರಿ ಐಎಎಸ್ ಅಧಿಕಾರಿ ರಿಷಿ ಆನಂದ,ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ಮಹಾನಗರಪಾಲಿಕೆ ಆಯುಕ್ತ ವಿಜಯಕುಮಾರ ಮಕ್ಕಳಕಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಎಸ್.ಎ.ಇನಾಮದಾರ, ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಡಿ.ಎಚ್.ಕಿರೇಸೂರ ಹಾಗೂ ವಿಠಲ ಎಸ್.ಹೊನ್ನಳ್ಳಿ, ಜಲಮಂಡಳಿ ಕಾರ್ಯಪಾಲಕಎಂಜಿನಿಯರ್ ಎಸ್.ಎಸ್.ಪಟ್ಟಣಶೆಟ್ಟಿ ಸಭೆಯಲ್ಲಿ ಇದ್ದರು.
****
ಸ್ವಚ್ಛ ಭಾರತ ಮಿಷನ್ಅಡಿ ವಿಜಯಪುರವನ್ನು ಉತ್ತಮ ಶ್ರೇಯಾಂಕಕ್ಕೆ ತರುವ ನಿಟ್ಟಿನಲ್ಲಿ ಉತ್ತಮ ಕೆಲಸ ನಿರ್ವಹಿಸಬೇಕು, ನೈರ್ಮಲ್ಯ ಕಾಪಾಡಲು ಸಾರ್ವಜನಿಕರು ಆದ್ಯತೆ ನೀಡಬೇಕು
–ಪಿ.ಸುನೀಲ್ ಕುಮಾರ್,ಜಿಲ್ಲಾಧಿಕಾರಿ, ವಿಜಯಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.