ವಿಜಯಪುರ: ಪ.ಗು.ಸಿದ್ದಾಪುರ ಎಂದೇ ಸಾಹಿತ್ಯ ಕ್ಷೇತ್ರದಲ್ಲಿ (ಮಕ್ಕಳ ಸಾಹಿತ್ಯ) ಚಿರಪರಿಚಿತರಾದವರು ಪರಪ್ಪ ಗುರುಪಾದಪ್ಪ ಸಿದ್ದಾಪೂರ.
ಬಸವನಬಾಗೇವಾಡಿ ಇವರ ಹುಟ್ಟೂರು. ಎಂ.ಎ, ಎ.ಎಂ(ಆರ್ಟ್ ಮಾಸ್ಟರ್) ಪದವೀಧರರು. ಕೊಲ್ಹಾರ ತಾಲ್ಲೂಕಿನ ಮುಳವಾಡ ಮಲ್ಲಿಕಾರ್ಜುನ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
‘ಪ್ರಭುಲಿಂಗಪ್ರಿಯ ಗುರುಪಾದೇಶ್ವರ’ ವಚನಾಂಕಿತದಲ್ಲಿ ವಚನಗಳನ್ನು, ಪ್ರಭುಲಿಂಗ ಹೆಸರಿನಲ್ಲಿ ತ್ರಿಪದಿಗಳನ್ನು ರಚಿಸಿದ್ದಾರೆ. 32 ಪ್ರಕಟಿತ ಸಾಹಿತ್ಯ ಕೃತಿಗಳು, 20 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ಪಠ್ಯಗಳಲ್ಲಿ 15 ರಷ್ಟು ಕವಿತೆಗಳು ಪಠ್ಯ ವಿಷಯವಾಗಿವೆ. ಇವರ ಒಂಬತ್ತು ಕೃತಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿವೆ.
ವಿಜಯಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಿದ್ದೇಶ್ವರ ರತ್ನ ಪ್ರಶಸ್ತಿ, ವಚನಶ್ರೀ ಪ್ರಮುಖ ಪ್ರಶಸ್ತಿಗಳನ್ನೊಳಗೊಂಡು 17 ಪ್ರಶಸ್ತಿಗಳು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಮಕ್ಕಳ ಚಂದಿರ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ ಮತ್ತು ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ ಮುಡಿಗೇರಿವೆ.
ಆಕಾಶವಾಣಿ ಬೆಂಗಳೂರು, ಧಾರವಾಡದಲ್ಲಿ ಝೆಂಕಾರ, ಗಿಳಿವಿಂಡು ಪ್ರಸಾರಗೊಂಡಿವೆ.
ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಉಪನ್ಯಾಸ ಗೋಷ್ಠಿ, ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ.
‘ರಾಜ್ಯೋತ್ಸವ ಪ್ರಶಸ್ತಿಗೆ ನನ್ನನ್ನು ಗುರುತಿಸಿದ್ದಕ್ಕೆ ತುಂಬಾ ಖುಷಿಯಾಗಿದೆ. ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನನಗೆ ನಾಡಿನ ಅತ್ಯುನ್ನತ ರಾಜ್ಯೋತ್ಸವ ನೀಡಿ ಗೌರವಿಸುತ್ತಿರುವ ಇಲಾಖೆಗೆ ತುಂಬು ಹೃದಯದ ಅಭಿನಂದನೆಗಳು’ ಎಂದು ಸಿದ್ದಾಪೂರ ಅವರು ‘ಪ್ರಜಾವಾಣಿ’ ಪ್ರತಿಕ್ರಿಯಿಸಿದರು.