ವಿಜಯಪುರ:ನಗರದ ಇಬ್ಬರು ಅಂಗವಿಕಲರ ಮನೆ ಬಾಗಿಲಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ್ ಗುರುವಾರ ತೆರಳಿ, ಫಲಾನುಭವಿಗಳ ಕೈಗೆ ಅಂಗವಿಕಲ ಪೋಷಣಾ ವೇತನ ಪಿಂಚಣಿ ಯೋಜನೆಯಡಿ ಮಾಸಿಕ ಪಿಂಚಣಿ ಮಂಜೂರಾತಿ ಆದೇಶದ ಪ್ರತಿ ನೀಡಿದರು.
ಇಲ್ಲಿನ ಲಕ್ಷ್ಮಿ ನಗರದ ನಿವಾಸಿ ಕಿರಣ್ ಮಲ್ಲಿಕಾರ್ಜುನ ಮಂಗಳವೇಡೆ ಮತ್ತು ಸಾವಿತ್ರಿ ಮಲ್ಲಿಕಾರ್ಜುನ ಮಂಗಳವೇಡೆ ಅವರಿಗೆ ಅಂಗವಿಕಲ ಪೋಷಣಾ ವೇತನ ಪಿಂಚಣಿ ಯೋಜನೆಯಡಿ ಮಾಸಿಕ ₹ 2 ಸಾವಿರ ಪಿಂಚಣಿ ಆದೇಶ ಪತ್ರ ನೀಡಿದರು.
ಪಿಂಚಣಿ ಮಂಜೂರಾತಿ ಆದೇಶ ಪಡೆದ ಇಬ್ಬರು ಫಲಾನುಭವಿಗಳ ಮೊಗದಲ್ಲಿ ಸಂತಸ ಕಂಡುಬಂದಿತು. ತನ್ನ ಮಗನಿಗೆ ಆಧಾರ್ ಕಾರ್ಡ್ ಇಲ್ಲ, ಪಿಂಚಣಿ ಇಲ್ಲ ಎಂದು ಕೊರಗುತ್ತಿದ್ದ ಕಿರಣ್ ಅವರ ತಾಯಿ ಅವರ ಮೊಗದಲ್ಲೂ ಕೂಡ ಸಂತಸ ಕಂಡು ಬಂದಿತು. ಕಿರಣ್ ಅವರ ತಾಯಿಯು ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಬಡವರ ಮನೆಗೆ ಖುದ್ದು ಭೇಟಿ ನೀಡಿ ಸಹಾಯ ಮಾಡಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ಅವರಿಗೆ ಕಿರಣ್ ಅವರ ತಾಯಿಯು ಧನ್ಯವಾದ ತಿಳಿಸಿದರು.
ವಿಜಯಪುರ ಸಹಾಯಕ ಆಯುಕ್ತ ಬಲರಾಮ ಲಮಾಣಿ, ತಹಶೀಲ್ದಾರ್ ಸಿದ್ದರಾಯ ಭೋಸಗಿ ಹಾಗೂ ಗ್ರೇಡ್ 2 ತಹಶೀಲ್ದಾರ್ ಐ.ಎಚ್.ತುಂಬಗಿ ಇದ್ದರು.