ಮುದ್ದೇಬಿಹಾಳ: ಪ್ರಜಾಪ್ರಭುತ್ವ ಉಳಿಯಲು ನಾವೆಲ್ಲರೂ ಮತದಾನ ಮಾಡಬೇಕು. ಹಾಗೇ ನಾವು ಆರೋಗ್ಯವಂತರಾಗಿ ಉಳಿಯಲು ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.
ಪಟ್ಟಣದ ಮಹಾಂತೇಶ ನಗರದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಕಚೇರಿಯನ್ನು ‘ಪರಿಸರ ಜಾಗೃತಿಯ ಹಸಿರು ಮತಗಟ್ಟೆ’ ಎಂದು ಜಿಲ್ಲಾ ಚುನಾವಣಾ ಸಮಿತಿಯು ವಿಶೇಷವಾಗಿ ಗುರುತಿಸಲಾದ ಪ್ರಯುಕ್ತ ಭಾನುವಾರ ಮತಗಟ್ಟೆಯ ಸುತ್ತಲೂ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾಂತೇಶ ನಗರದ ಮತಗಟ್ಟೆ ವಲಯ ಅಧಿಕಾರಿ ಕುಬೇರಸಿಂಗ್ ಜಾಧವ ಮಾತನಾಡಿ, ಮತದಾನಕ್ಕೆ ಬರುವ ಮೊದಲ ನೂರು ಮತದಾರರಿಗೆ ಗಿಡಗಳನ್ನು ನೀಡುವ ಮೂಲಕ ಹೆಚ್ಚು ಮತದಾನಕ್ಕೆ ಪ್ರೋತ್ಸಾಹಿಸುವ ಕೆಲಸ ಮಾಡಲಾಗುವುದು. ಹಸಿರು ತೋರಣ ಬಳಗ ಪರಿಸರದ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ನಾವು ಈ ಭೂಮಿಯ ರಕ್ಷಣೆಗಾಗಿ ಹೆಚ್ಚು ಖಾಸಗಿ ವಾಹನಗಳನ್ನು ಬಳಸದೇ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸಬೇಕು ಎಂದರು.
ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಎಸ್.ಜಿ.ಸಂಗಾಲಕ ಮಾತನಾಡಿ, ಗಿಡಗಳನ್ನು ನೆಡಬೇಕು. ಆ ಗಿಡಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯಬೇಕು. ಅದೇ ಗಿಡಗಳ ಹಣ್ಣು ತಿನ್ನುವಂತಾಗಬೇಕು. ಹೀಗಾದರೆ ಅದು ಸಮೃದ್ಧಿ ಹಾಗೂ ಆರೋಗ್ಯದ ಲಕ್ಷಣ ಎಂದ ಅವರು ಮತದಾನ ಎಂದರೆ ದೇಶಸೇವೆಯೇ ಆಗಿದೆ. ಎಲ್ಲರನ್ನೂ ಮತಗಟ್ಟೆಯ ಕಡೆಗೆ ಕರೆದುಕೊಂಡು ಹೋಗುವ ಕೆಲಸ ನಾವು ಮಾಡಬೇಕು ಎಂದು ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿದರು. ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾರಾರ, ಕೆಬಿಜೆನ್ನೆಲ್ಲ ವಲಯ ಅರಣ್ಯಾಧಿಕಾರಿ ಯಶವಂತ ರಾಠೋಡ,ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷರಾದ ಬಿ.ಎಸ್.ಮೇಟಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಸುರೇಶ ಕಲಾಲ, ಕಿರಣ ಕಡಿ, ಅಮರೇಶ ಗೂಳಿ, ವಿಲಾಸರಾವ್ ದೇಶಪಾಂಡೆ, ರವಿ ತಡಸದ, ಆದೇಶ ಕೋಳೂರ, ಅರಣ್ಯ ಇಲಾಖೆಯ ಅನಿಲ ರಾಠೋಡ, ಮೃತ್ಯುಂಜಯ ಬಿದರಕುಂದಿ, ಅನಿಲ ಚವ್ಹಾಣ, ಪರಮಾನಂದ ಪಾಟೀಲ, ಅಶೋಕ ಚವ್ಹಾಣ, ಪುರಸಭೆಯ ಆರೋಗ್ಯ ನಿರೀಕ್ಷಕ ಮಹಾಂತೇಶ ಕಟ್ಟಿಮನಿ, ಸಹಾಯಕ ಜಾವೇದ ನಾಯ್ಕೋಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.