ವಿಜಯಪುರ: ನಗರದ ರೈಲು ನಿಲ್ದಾಣದಲ್ಲಿಲಾರಿಯೊಂದು ಡಿಕ್ಕಿ ಹೊಡೆದು, ಹಳಿಗಳ ಮೇಲೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಮೂರು ರೈಲುಗಳ ಸಂಚಾರಕ್ಕೆ ಅಡಚಣೆಯಾಯಿತು.
ಶುಕ್ರವಾರ ಮಧ್ಯಾಹ್ನ 3.45ಕ್ಕೆ ಈ ಅವಘಡ ಸಂಭವಿಸಿದ್ದು, ಸಂಜೆ 6.50ಕ್ಕೆ ಕಂಬವನ್ನು ತೆರವುಗೊಳಿಸಲಾಯಿತು. ಕಂಬದಲ್ಲಿ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಯಾವುದೇ ಅನಾಹುತ ನಡೆದಿಲ್ಲ.
ಈ ಅವಘಡದಿಂದಾಗಿ ಬಾಗಲಕೋಟೆ-ಮೈಸೂರು ಬಸವ ಎಕ್ಸ್ಪ್ರೆಸ್, ಸೊಲ್ಲಾಪುರ-ಮೈಸೂರು ಗೋಲ್ಗುಂಬಜ್ ಏಕ್ಸ್ಪ್ರೆಸ್, ಗದಗ-ಮುಂಬೈ ಏಕ್ಸ್ಪ್ರೆಸ್ ರೈಲುಗಳು ನಿಗದಿತ ಸಮಯಕ್ಕೆ ಸಂಚರಿಸಲು ಸಾಧ್ಯವಾಗದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಸಂಜೆ 6.50ಕ್ಕೆ ಕಂಬವನ್ನು ತೆರವುಗೊಳಿಸಿದ ಬಳಿಕ ರೈಲುಗಳ ಸಂಚಾರ ಆರಂಭವಾಯಿತು ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದರು.