ವಿಜಯಪುರ: ಇಲ್ಲಿನಜಿಲ್ಲಾ ಪಂಚಾಯ್ತಿ ಹತ್ತಿರ ನಿರ್ಮಾಣಗೊಳ್ಳಲಿರುವ ನೂತನ ಜಿಲ್ಲಾಡಳಿತ ಭವನದ ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿವಿಧ ಇಲಾಖೆಗಳ ಸಚಿವರು ಡಿ.25 ರಂದು ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಮಾಜಿ ಪ್ರಧಾನಿ ದಿ. ಅಟಲ್ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ನಗರದ ಕಿರಾಣಾ ಬಜಾರದಲ್ಲಿರುವ ವಾಜಪೇಯಿ ಮೂರ್ತಿಗೆ ಮಾಲಾರ್ಪಣೆ ಮಾಡುವರು. ನಂತರ 10:30 ಕ್ಕೆ ನೇರವಾಗಿ ಜಿಲ್ಲಾ ಪಂಚಾಯಿತಿ ಹತ್ತಿರದ ವಿಶಾಲ ಜಾಗದಲ್ಲಿ ನಿಯೋಜಿತ ಜಿಲ್ಲಾಡಳಿತ ಭವನದ ಭೂಮಿ ಪೂಜೆ ನೆರವೇರಿಸಿ, ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವರು ಎಂದರು.
ವಿಜಯಪುರ ನಗರ ಮತಕ್ಷೇತ್ರಕ್ಕೆ ಅಭಿವೃದ್ಧಿ ಕಾಮಗಾರಿಗಳಾದ ಜಿಲ್ಲಾಡಳಿತ ಭವನ, ಡಾ.ಬಿ.ಆರ್.ಅಂಬೇಡ್ಕರ ಸರ್ಕಲ್ ದಿಂದ ಕೋಟೆಗೋಡೆ ವರೆಗಿನ ರಸ್ತೆಯ ಬಲಬದಿಯ ಪಾದಚಾರಿ ಮಾರ್ಗ, ರಸ್ತೆ ವಿಭಜಕದ ಪೇಂಟಿಂಗ್, ಸೈನ್ ಬೋರ್ಡ್, ರಸ್ತೆ ಹಾಗೂ ಸೌಂದರೀಕರಣ ಕಾಮಗಾರಿ, ಜಿಲ್ಲಾಸ್ಪತ್ರೆಯನ್ನು 250 ಹಾಸಿಗೆಗಳಿಂದ 500 ಹಾಸಿಗೆಗಳ ಸಾಮರ್ಥ್ಯಕ್ಕೆ ಹೆಚ್ಚುವರಿ ಕಟ್ಟಡದ ನಿರ್ಮಾಣ, ಮಹಾನಗರ ಪಾಲಿಕೆಯ 2020-21ನೇ ಸಾಲಿನ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಪ್ಯಾಕೇಜ್ ನಂ.3, 4, 5 ನಗರದಲ್ಲಿ ಆಂತರಿಕ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು ಎಂದು ಹೇಳಿದ್ದಾರೆ.
ಕಟ್ಟಡ ಕಾಮಗಾರಿಗಳ ಪೂರ್ಣಗೊಂಡ ಕೊಳಗೇರಿ ಅಭಿವೃದ್ಧಿ ಮಂಡಳಿ ನೂತನ ಕಾರ್ಯಪಾಲಕ ಎಂಜಿನಿಯರ್ ವಿಭಾಗೀಯ ಕಚೇರಿ, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ವಿಭಾಗೀಯ ಗುಣ ನಿಯಂತ್ರಣ ತರಬೇತಿ ಕೇಂದ್ರ, ಜಿಲ್ಲಾಸ್ಪತ್ರೆ ಆವರಣದಲ್ಲಿಯ ಆಯುಷ್ ಪಂಚಕರ್ಮ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರ್, ಸರ್ಕಾರಿ ಬಾಲಕರ ಬಾಲಮಂದಿರ, ಮೆಟ್ರಿಕ್ ನಂತರದ ಬಾಲಕಿಯರ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಸತಿ ನಿಲಯ, ಮೆಟ್ರಿಕ್ ನಂತರದ ಬಾಲಕಿಯರ ವೃತ್ತಿಪರ ವಸತಿ ನಿಲಯ, ಮೆಟ್ರಿಕ್ ನಂತರದ ಬಾಲಕರ ಮಾದರಿ ವಸತಿ ನಿಲಯ, ಮಹಾನಗರ ಪಾಲಿಕೆ ಒಡೆತನದ ವಾಣಿಜ್ಯ ಕಟ್ಟಡ, ಕನಕದಾಸ ಬಡಾವಣೆಯಲ್ಲಿ ಒಳಾಂಗಣ ಕ್ರೀಡಾಂಗಣ, ಡಾ.ಬಾಬು ಜಗಜೀವನರಾಂ ಭವನ, ಮಹಿಳಾ ಕ್ರೀಡಾ ವಸತಿ ನಿಲಯ ಇವುಗಳ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದ್ದಾರೆ.
ವಸತಿ ಇಲಾಖೆಯಿಂದ 3770 ಕೊಳಗೇರಿ ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮತ್ತು 1285 ಕೊಳಗೇರಿ ಅಭಿವೃದ್ಧಿ ಮಂಡಳಿ ಮನೆಗಳ ನಿರ್ಮಾಣ, ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಎಂದರು.
ವಿವಿಧ ಇಲಾಖೆಗಳ, ವಿವಿಧ ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಯನ್ನು ಒಂದೇ ವೇದಿಕೆಯ ಮೇಲೆ ವಿವಿಧ ಇಲಾಖೆ ಸಚಿವರೊಂದಿಗೆ ಅಡಿಗಲ್ಲು ಅನಾವರಣ ಮೂಲಕ ನೆರವೇರಿಸುವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****
ವಿಜಯಪುರ ನಗರ ಮತಕ್ಷೇತ್ರದ ಹಾಗೂ ವಿಜಯಪುರ ಜಿಲ್ಲೆಯ ಇತಿಹಾಸದಲ್ಲೆ ಮೊದಲ ಬಾರಿಗೆ ಮುಖ್ಯಮಂತ್ರಿ ಅವರಿಂದ ನೂರಾರು ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆರಂಭ, ಲೋಕಾರ್ಪಣೆಯಾಗುತ್ತಿವೆ.
–ಬಸವನಗೌಡ ಪಾಟೀಲ ಯತ್ನಾಳ,ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.