ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾಳಿಕೋಟೆ: ಕೆರೆಯಲ್ಲಿಯೇ ಅನಿರ್ದಿಷ್ಟಾವಧಿ ಧರಣಿ ಆರಂಭ

ಅಸ್ಕಿ, ಬೆಕಿನಾಳ, ಬೂದಿಹಾಳ(ಪಿ.ಟಿ) ಕೆರೆ ನೀರು ತುಂಬಿಸುವಂತೆ ಒತ್ತಾಯಿಸಿ
Published 21 ಮೇ 2024, 14:12 IST
Last Updated 21 ಮೇ 2024, 14:12 IST
ಅಕ್ಷರ ಗಾತ್ರ

ತಾಳಿಕೋಟೆ: ಅಸ್ಕಿ, ಬೆಕಿನಾಳ ಹಾಗೂ ಬೂದಿಹಾಳ ಪಿ.ಟಿ. ಕೆರೆ ನೀರು ತುಂಬಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಾಲ್ಲೂಕಿನ ಆಸ್ಕಿ ಕೆರೆಯಲ್ಲಿ ನೂರಾರು ರೈತರು ಮಂಗಳವಾರ ಬೆಳಿಗ್ಗೆಯಿಂದಲೇ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದರು.

ಇದಕ್ಕೂ ಮೊದಲು ರೈತರು ಅಸ್ಕಿ ಗ್ರಾಮದ ಮುಖ್ಯಬಜಾರದಿಂದ ಹಲಗಿ ಮೇಳದೊಂದಿಗೆ ವಿವಿಧ ಘೋಷಣೆಗಳನ್ನು ಕೂಗುತ್ತ ಕೆರೆಯಡೆಗೆ ಹೆಜ್ಜೆ ಹಾಕಿದರು.

ಅಸ್ಕಿ ಗ್ರಾಮದ ರೈತ ಸಂಘದ ಅಧ್ಯಕ್ಷ ಸಂಗನಗೌಡ ಬಿರಾದಾರ ಮಾತನಾಡಿ, ‘ಈ ವರ್ಷದ ಭೀಕರ ಬರಗಾಲದಿಂದ ನಮ್ಮಲ್ಲಿ ಎಲ್ಲ ಹಳ್ಳ, ಕೆರೆಗಳು ಬತ್ತಿಹೋಗಿ ಬಾವಿ ಹಾಗೂ ಕೊಳವೆ ಬಾವಿಯಲ್ಲಿನ ನೀರು ಕಡಿಮೆಯಾಗಿದೆ. ಕೃಷಿಗೆ ನೀರಿಲ್ಲದೇ, ಜನ ಜಾನುವಾರುಗಳಿಗೆ ಕುಡಿಯಲು ಹನಿ ನೀರು ಇಲ್ಲದೇ ಹರಸಾಹಸ ಪಡುವಂತಾಗಿದೆ. ಕೆರೆಗೆ ನೀರು ಹರಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ’ ಎಂದರು.

ತಾಳಿಕೋಟೆ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಶೈಲ ವಾಲಿಕಾರ ಅವರು ಮಾತನಾಡಿ, ‘ನಮ್ಮ ಕೆರೆಗಳಿಗೆ ನೀರು ಹರಿಸದಿದ್ದರೆ ಈ ಭಾಗದ ಆಸ್ಕಿ, ಬೆಕಿನಾಳ, ಬೂದಿಹಾಳ, ಜಲಪುರ, ಬನ್ನೆಟ್ಟಿ, ನೀರಲಗಿ, ವಣಕ್ಯಾಳ ಗ್ರಾಮದ ರೈತರು ಸೇರಿಕೊಂಡು ಜಿಲ್ಲಾಧಿಕಾರಿ ಕಚೇರಿಯ ಎದುರು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ’ ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಗೌಡಪ್ಪಗೌಡ ಹಳಿಮನಿ, ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ, ಡಾ.ಪ್ರಭುಗೌಡ ಬಿರಾದಾರ, ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅನ್ವರ ಅವಟಿ, ಶಿವಶಂಕರ ಸಜ್ಜನ, ಲಿಂಗಣ್ಣ ನಾಯಕಲ್ ಅವರು ಹೋರಾಟ ಬೆಂಬಲಿಸಿ ಮಾತನಾಡಿದರು.

ಗ್ರಾಮ ಲೆಕ್ಕಾಧಿಕಾರಿ ಪವನ ಬೆಂಕಿ ಮತ್ತು ಕಂದಾಯ ನಿರೀಕ್ಷಕ ವಿನೋದ ಸಿಂದಗಿರಿ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಮನ ಒಲಿಸಲು ಪ್ರಯತ್ನಿಸಿದರೂ ಜಗ್ಗದ ರೈತರು ತಹಶೀಲ್ದಾರ್‌ ಹಾಗೂ ಕೆಬಿಜೆಎನ್‌ಎಲ್‌ ಅಧಿಕಾರಿಗಳು ಬರುವವರೆಗೂ ಧರಣಿ ನಿಲ್ಲದು ಎಂದು ಪಟ್ಟು ಹಿಡಿದರು. ಸಂಜೆಗೆ ಬಂದ ಕೆಬಿಜೆಎನ್ಎಲ್‌ ಎಇಇ ಎಸ್.ಎನ್. ಬಂಡಿವಡ್ಡರ ರೈತರೊಂದಿಗೆ ಚರ್ಚೆ ನಡೆಸಿ, ನಾಳೆ ಈ ಕುರಿತು ವಿಶೇಷ ಸಭೆ ನಡೆಯಲಿದ್ದು ಹಾಜರ್ ಇರುವಂತೆ ಮನವಿ ಮಾಡಿ ಮರಳಿದರು.

ಹೋರಾಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ಶರಣಗೌಡ ಬಿರಾದಾರ, ತಾಲ್ಲೂಕು ಸಂಚಾಲಕ ಮಹಿಬೂಬ ಗೊಬ್ಬರಡಗಿ, ಗ್ರಾ.ಪಂ ಉಪಾಧ್ಯಕ್ಷ ಅಯ್ಯಪ್ಪ ಮುಗಳಿ, ರಾಮನಗೌಡ ಚೌದ್ರಿ, ಮಲ್ಲಪ್ಪ ಅಂಗಡಿ, ಮುತ್ತು ಹೂಗಾರ, ಗುರನಗೌಡ ಬಿರಾದಾರ, ಮಂಜು ಪಡಶೆಟ್ಟಿ, ಮಹದೇವಪ್ಪ ಮಾದರ, ವೆಂಕಣ್ಣ ಗುತ್ಯಾಳ, ಬಸವರಾಜ ಹಡಪದ, ಶಾಂತಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ಪ್ರಭುಗೌಡ ಹಳಿಮನಿ, ಶಂಕರ ಮಗದಾಳ, ದೇವಿಂದ್ರ ತುರಕನಗೇರಿ, ಬೆಕಿನಾಳ ಗ್ರಾಮದ ದೇವಿಂದ್ರಪ್ಪಗೌಡ ಪಾಟೀಲ, ಶ್ರೀಶೈಲ ಸಜ್ಜನ, ಮಲ್ಲಪ್ಪ ಮುದನೂರ, ಶ್ರೀಶೈಲ ಹಿರೇಮಠ, ರಾಮನಗೌಡ ಕರಕಳ್ಳಿ, ಲಕ್ಷ್ಮಣ ಚಲವಾದಿ, ಮರಲಿಂಗಪ್ಪ ನಾಟಿಕಾರ, ಮಡಿವಾಳಪ್ಪ ಸಜ್ಜನ, ಬೂದಿಹಾಳ ಗ್ರಾಮದ ಬಸನಗೌಡ ಪಾಟೀಲ, ಸಂತೋಷ ಕುಳಗೇರಿ, ಭೀಮನಗೌಡ ಬಿರಾದಾರ, ಶರಣಪ್ಪ ಹಯ್ಯಾಳ, ಜಟ್ಟೆಪ್ಪ ಮಾದರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT