ವಿಜಯಪುರ: ಅತ್ಯಾಚಾರ ಎಸಗಿದ ಆರೋಪಿಗೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಜೈಲು, ಹಾಗೂ ₹ 45000 ದಂಡ ವಿಧಿಸಿ ಆದೇಶ ಹೊರಡಿಸಿದೆ. ಸಂತ್ರಸ್ತೆಗೆ ₹ 2 ಲಕ್ಷ ಪರಿಹಾರ ನೀಡುವಂತೆಯೂ ಆದೇಶಿಸಿದೆ.
ತಿಕೋಟಾ ತಾಲ್ಲೂಕು ರತ್ನಾಪುರ ಗ್ರಾಮದ ಸಂಗಪ್ಪ ನಿಂಗಪ್ಪ ಹಿರೇಕುರುಬರ ಶಿಕ್ಷೆಗೆ ಗುರಿಯಾದ ವ್ಯಕ್ತಿ.
2014ರ ಜೂನ್ 13 ರಂದು ಈತ ಮಹಿಳೆ ತಮ್ಮ ಜಮೀನಿನ ಮನೆಯ ಮುಂಭಾಗ ರಾತ್ರಿ ಮಕ್ಕಳೊಂದಿಗೆ ಮಲಗಿದ್ದಾಗ, ಅಪಹರಿಸಿಕೊಂಡು ಗೋವಾದ ವಾಸ್ಕೋದಲ್ಲಿನ ಬಿರ್ಲಾ ಕಾಲೊನಿಗೆ ಕರೆದೊಯ್ದು, 10 ದಿನ ಅತ್ಯಾಚಾರ ಎಸಗಿದ್ದ. ತಿಕೋಟಾ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಯ್ಕ, ಸಾಕ್ಷಾಧಾರಗಳನ್ನು ಪರಿಶೀಲನೆ ನಡೆಸಿ ಆರೋಪಿಗೆ 10 ವರ್ಷ ಜೈಲು, ₹ 45000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ ಎಂದು ಸರ್ಕಾರಿ ವಕೀಲ ಕೆ.ಕೆ.ಕುಲಕರ್ಣಿ ತಿಳಿಸಿದ್ದಾರೆ.