ಮುದ್ದೇಬಿಹಾಳ: ತಾಲ್ಲೂಕಿನ ಅಂಗನವಾಡಿ ನೌಕರರ 2019ರ ಜುಲೈ ತಿಂಗಳ ವೇತನ ಪಾವತಿ ಮಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು, ಹಿರಿಯ ಅಧಿಕಾರಿಗಳು, ಕ್ಷೇತ್ರದ ಶಾಸಕರನ್ನು ಅಭಿನಂದಿಸುತ್ತೇವೆ. ಇದು ಅಂಗನವಾಡಿ ನೌಕರರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಎಐಯುಟಿಯುಸಿ ಸಂಘಟನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈಚೆಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
2021, 2022ರ ಜೂ.29 ರಂದು, ನಮ್ಮ ತಾಲ್ಲೂಕಿನ ಅಂಗನವಾಡಿ ನೌಕರರ 2019ರ ಜುಲೈ ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ವಿವಿಧ ಹಂತದಲ್ಲಿ ಹೋರಾಟ ನಡೆಸಿದ್ದೇವೆ. ಜೂ.26 ರಿಂದ ನಾಲ್ಕು ದಿನಗಳ ಕಾಲ ಸಿಡಿಪಿಒ ಕಚೇರಿ ಎದುರಿಗೆ ಹೋರಾಟ ಮಾಡಿದ್ದೆವು. ಅಲ್ಲಿ ಸ್ಪಂದನೆ ದೊರೆಯದಿದ್ದಾಗ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಹೋರಾಟ ನಡೆಸಿದ್ದೇವೆ. 2021ರಲ್ಲಿ ಸಿಡಿಪಿಒ ಆಗಿದ್ದ ಸಾವಿತ್ರಿ ಗುಗ್ಗರಿ ಅವರು ವೇತನ ಪಾವತಿಸುವುದಾಗಿ ಲಿಖಿತ ಪತ್ರ ನೀಡಿದ್ದರು.
2023ರ ಅಕ್ಟೋಬರ್ 30ರಂದು ಇಲಾಖೆಯ ಜೆಡಿ ಉಷಾ ಅವರನ್ನು ಭೇಟಿ ಮಾಡಿ ಬಾಕಿ ವೇತನ ಪಾವತಿಸುವ ಕುರಿತು ಮನವಿ ಸಲ್ಲಿಸಿದಾಗ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಬಳಿಕ ವೇತನ ಪಾವತಿಗೆ ಆದೇಶಿಸಿದ್ದರು. ನ.8 ರಂದು ಬುಧವಾರ ಸಂಜೆ ನೌಕರರ ಖಾತೆಗೆ ವೇತನ ಪಾವತಿ ಆಗಿದೆ ಎಂದು ಸಿಇಒ ರಾಹುಲ್ ಸಿಂಧೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ಕೆಲವೊಬ್ಬರು ನಮ್ಮ ಸಂಘಟನೆಯ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು. ಅದಕ್ಕೆ ನಾವು ನಮ್ಮ ಹೋರಾಟದ ಮೂಲಕವೇ ಉತ್ತರ ಕೊಟ್ಟಿದ್ದೇವೆ. ಈ ಬಾಕಿ ವೇತನ ಪಾವತಿಗೆ ಸಾಕಷ್ಟು ಕಷ್ಟಪಟ್ಟಿದ್ದೇವೆ. ಅನೇಕ ಅಪವಾದಗಳನ್ನು ಹೊತ್ತುಕೊಂಡೆವು. ಆದರೆ ಅದನ್ನು ಮರಳಿ ನೆನಪಿಸುವುದಿಲ್ಲ ಎಂದು ಹೇಳಿದರು.
ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷೆ ಸಾವಿತ್ರಿ ನಾಗರತ್ತಿ ಮಾತನಾಡಿ, ತಾಲ್ಲೂಕಿನ 420ಕ್ಕೂ ಹೆಚ್ಚು ಕಾರ್ಯಕರ್ತೆಯರಿಗೆ ತಲಾ ₹8 ಸಾವಿರ, ಸಹಾಯಕಿಯರಿಗೆ ತಲಾ ₹4 ಸಾವಿರ ವೇತನ ಪಾವತಿಯಾಗಿದೆ ಎಂದು ತಿಳಿಸಿದರು.
ಸಂಘಟನೆ ಪ್ರಧಾನ ಕಾರ್ಯದರ್ಶಿ ರೇಣುಕಾ ಹಡಪದ ಮಾತನಾಡಿದರು.
ಉಪಾಧ್ಯಕ್ಷೆ ಗುರುಬಾಯಿ ಮಳಗೌಡರ, ಶಶಿಕಲಾ ಮಾದರ, ಸುವರ್ಣಾ ಕಾಳೆ, ಮಹಾದೇವಿ ನಾಗೋಡ, ಜಯಶ್ರೀ ಜೀರಲಭಾವಿ, ಶಾಂತ ಕಠಾರೆ, ಲಕ್ಷ್ಮಿ ಬಿರಾದಾರ, ಬಸಮ್ಮ ಹಿರೇಮಠ, ಶಶಿಕಲಾ ಹಿರೇಮಠ, ಎಸ್.ಎ.ಹುಣಶ್ಯಾಳ, ಶೋಭಾ ಪಾಟೀಲ್, ಶೈಲಾ ರಾಠೋಡ, ಕಲಾವತಿ ಪಾದಗಟ್ಟಿ, ರೇಣುಕಾ ಕುಂಟೋಜಿ, ಕಲಾವತಿ ವಂದಾಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.