ವಿಜಯಪುರ: ನನ್ನ ಗಿಡ ನನ್ನ ಭೂಮಿ ಸಂಘಟನೆಯು ‘ಮನೆ ಮನೆಗೆ ಮಣ್ಣಿನ ಗಣಪ’ ಎಂಬ ಅಭಿಯಾನ ಹಮ್ಮಿಕೊಂಡಿದೆ ಎಂದು ಸಂಘಟನೆಯಸಂಚಾಲಕರಾದ ಬಸವರಾಜ ಬೈಚಬಾಳ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ವಿವಿಧ ರಾಸಾಯನಿಕಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಬದಲಿಗೆ ಪರಿಸರಕ್ಕೆ ಪೂರಕವಾದ ಶುದ್ಧ ಮಣ್ಣಿನಿಂದ ತಯಾರಿಸಿದ ಗಣೇಶನ ಮೂರ್ತಿಗಳನ್ನು ಮನೆಮನೆಗೆ ತಲುಪಿಸುವುದು ಸಂಘಟನೆಯ ಉದ್ದೇಶವಾಗಿದೆ ಎಂದರು.
ಈಗಾಗಲೇ ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಕೊಣ್ಣೂರಿನಿಂದ ಸುಮಾರು ಎಂಟು ಸಾವಿರ ಮಣ್ಣಿನ ಮೂರ್ತಿಗಳನ್ನು ನಗರಕ್ಕೆ ತರಲಾಗಿದೆ. ₹170ರಿಂದ ₹ 1ಸಾವಿರ ಬೆಲೆಯ ಆಕರ್ಷಕ ಗಣಪನ ಮೂರ್ತಿಗಳು ಲಭ್ಯವಿದ್ದು, ಸಾರ್ವಜನಿಕರು ಕೊಂಡೊಯ್ಯಬಹುದು ಎಂದರು.
ನಗರದ ಎಸ್.ಎಸ್.ರಸ್ತೆಶ್ರೀಸಿದ್ಧೇಶ್ವರ ಕಲಾಭವನ, ಲಿಂಗದ ಗುಡಿ ರಸ್ತೆ ಸಂಗನಬಸವ ಮಂಗಲ ಕಾರ್ಯಾಲಯ, ಜಲನಗರದನಿಂಬೆಕ್ಕ ಮಂಗಲ ಕಾರ್ಯಾಲಯ, ಜೋರಾಪುರ ಪೇಠ ಶ್ರೀಶಂಕರ ಲಿಂಗ ದೇವಸ್ಥಾನದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.