ಸೋಲಾಪುರ(ವಿಜಯಪುರ): ಸೀನಾ ನದಿಯಲ್ಲಿಪ್ರವಾಹ ಪರಿಸ್ಥಿತಿ ತಲೆದೋರಿರುವುದರಿಂದ ದಕ್ಷಿಣ ಸೋಲಾಪುರ ತಾಲ್ಲೂಕಿನ ತೆಲಗಾವ ಹತ್ತಿರದ ಸೇತುವೆ ಮೇಲೆ ನೀರು ಹರಿಯುತ್ತಿದೆ. ಈ ರಸ್ತೆ ಮೂಲಕ ಚಲಿಸುವ ವಾಹನಗಳ ಸಂಚಾರ ಸ್ಥಗಿತವಾಗಿದೆ.
ಮೂರು ದಿನಗಳಿಂದ ಉಜಿನಿ ಜಲಾಶಯದ ಹಾಗೂ ಅಹಮ್ಮದ್ ನಗರ ಜಿಲ್ಲೆಯ ಸೀನಾ ನದಿಯ ಉಗಮ ಭಾಗದಲ್ಲಿ ಹೆಚ್ಚು ಮಳೆ ಆಗುತ್ತಿರುವುದರಿಂದ ನದಿ ತುಂಬಿ ಹರಿಯುತ್ತಿದೆ.
ಕಂದಲ್ಗಾವ್, ತೆಲಗಾವ, ಔರಾದ, ಸಂಜವಾಡ, ನಂದೂರ್, ಸಿಂಧಖೇಡ, ರಾಜೂರ ಈ ಮಾರ್ಗವಾಗಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಈ ಭಾಗದ ರೈತರ ಹೊಲಗಳು ಜಲಾವೃತವಾಗಿವೆ. ಬೆಳೆಗಳು ನೀರಿನಲ್ಲಿ ಮುಳುಗಿದ್ದು ರೈತರು ನಷ್ಠಕ್ಕೆ ಒಳಗಾಗಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿ ಮನಿಷಾ ಆವ್ಹಾಳೆ, ತಹಶೀಲ್ದಾರ್ ಉಜ್ವಲಾ ಸೋರಟೆ, ಮಂದೃಪ್ ಪೊಲೀಸ್ ಠಾಣೆಯ ಸಿಪಿಐ ಡಾ. ನಿತಿನ ಥೇಟೆ ಸ್ಥಳಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು.
ಸೀನಾ ನದಿ ಭಾಗದಲ್ಲಿರುವ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಕ್ಕೆ ಹೋಗಲು ಹಾಗೂ ಮಹಿಳೆಯರು, ಮಕ್ಕಳು ನೀರಲ್ಲಿ ಇಳಿಯದಂತೆ ಅವರು ಮನವಿ ಮಾಡಿದರು.
ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಈ ಭಾಗದ ಜನರ ಜೊತೆ ಸತತ ಸಂಪರ್ಕದಲ್ಲಿರಲು ಸೂಚನೆ ನೀಡಿದರು.
ಕಂದಾಯ ನಿರೀಕ್ಷಕ ಸಂತೋಷ ಫುಲಾರಿ, ಶ್ರೀಸ್ವಾಮಿ, ಪೊಲೀಸ್ ಪಾಟೀಲ್ ಅಶೋಕ್ ಪೂಜಾರಿ ಇದ್ದರು.