ವಿಜಯಪುರ: ಜಿಲ್ಲೆಯ ತಿಕೋಟಾ, ಕೊಲ್ಹಾರ, ದೇವರ ಹಿಪ್ಪರಗಿ, ಬಸವ ಬಾಗೇವಾಡಿ, ತಾಳಿಕೋಟೆ ವ್ಯಾಪ್ತಿಯಲ್ಲಿ ಗುಡುಗು, ಗಾಳಿಯ ಅಬ್ಬರದೊಂದಿಗೆ ಶುಕ್ರವಾರ ಸಂಜೆ ಧಾರಾಕಾರವಾಗಿ ಮಳೆಯಾಗಿದೆ.
ಬಿರುಗಾಳಿ ಸಹಿತ ಬಾರಿ ಮಳೆಯಾಗಿ ವಿಜಯಪುರ–ಅಥಣಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಮೇಲೆ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಪಟ್ಟಣದಿಂದ ರತ್ನಾಪುರ ಕ್ರಾಸ್ ವರೆಗೆ ಐದಾರು ಮರಗಳು ರಸ್ತೆಯ ಮೇಲೆ ಉರುಳಿವೆ.
ಶುಕ್ರವಾರ ಸಂಜೆ ಒಂದು ಗಂಟೆಗೂ ಅಧಿಕ ಸಮಯ ಮಳೆ ಬಂದಿದ್ದು, ಜೋರಾದ ಗಾಳಿ ಬಿಸಿ, ರಸ್ತೆಯ ತುಂಬೆಲ್ಲ ನೀರು ಆವರಿಸಿತು.
ಪಟ್ಟಣದ ಹೊರವಲಯದ ಪ್ರವಾಸಿ ಮಂದಿರ ಹತ್ತಿರ ರಸ್ತೆಯ ಮೇಲೆಯೆ ಗಿಡ ಉರುಳಿದೆ. ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ಸಾರ್ವಜನಿಕರೇ ರಸ್ತೆ ಮೇಲೆ ಉರುಳಿದ ಮರದ ಟೊಂಗೆಯನ್ನು ರಸ್ತೆ ಪಕ್ಕ ಹಾಕಿ ಇಕ್ಕಟಾದ ರಸ್ತೆಯಲ್ಲಿ ಸಂಚಾರ ಪ್ರಾರಂಭಿಸಿದ್ದಾರೆ.
ತುಂಬಿ ಹರಿದ ಚರಂಡಿಗಳು: ಪಟ್ಟಣದ ಚರಂಡಿಗಳು ತುಂಬಿ ರಸ್ತೆ ಮೇಲೆ ಮಳೆ ನೀರು ಹರಿಯಿತು. ಪಟ್ಟಣದ ಪ್ರಮುಖ ಬೀದಿಗಳ ರಸ್ತೆಯುದ್ದಕ್ಕೂ ನೀರಿನಿಂದ ಆವೃತ್ತವಾಗಿತ್ತು.