ತಿಕೋಟಾ: ಕಬ್ಬಿನ ತೋಟದಲ್ಲಿ ವಿದ್ಯುತ್ ತಂತಿ ಕಟ್ಟಾಗಿ ಬಿದ್ದಿದ್ದರಿಂದ ವಿದ್ಯುತ್ ಪ್ರವಹಿಸಿ 3 ಎಕರೆ ಕಬ್ಬು ಸೇರಿದಂತೆ ವಿವಿಧ ಹಣ್ಣಿನ ಗಿಡಗಳು ಸಂಪೂರ್ಣ ಸುಟ್ಟ ಘಟನೆ ಶುಕ್ರವಾರ ತಾಲ್ಲೂಕಿನ ನಡೆದಿದೆ ಸಿದ್ದಾಪುರ (ಕೆ) ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಆನಂದ ಸಣ್ಣತಮ್ಮಪ್ಪ ವಿಜಾಪೂರ ಇವರ ತೋಟದಲ್ಲಿ ಮೂರು ಎಕರೆ ಕಬ್ಬು ಮತ್ತು ಅವಿನಾಶ ಈರಪ್ಪ ತೇಲಿ ಇವರ ತೋಟದಲ್ಲಿಯ ಹಣ್ಣಿನ ಮರಗಳು ಬೆಂಕಿಗೆ ಆಹುತಿಯಾಗಿವೆ. ತೋಟದಲ್ಲಿ ಬೆಂಕಿ ಹೊತ್ತಿಕೊಂಡ ಕುರಿತು ತೋಟದ ಅಕ್ಕಪಕ್ಕದ ರೈತರು ನೋಡಿ ಮಾಲೀಕರಿಗೆ ಕರೆ ಮಾಡಿ ತಿಳಿಸಿದರು. ತೋಟಕ್ಕೆ ಮಾಲೀಕ ಆನಂದ ಹಾಗೂ ಅವಿನಾಶ ಅವರು ಬಂದು ನೋಡುವಷ್ಟರಲ್ಲಿ ಬೆಂಕಿ ಹೊಲದ ತುಂಬಾ ವ್ಯಾಪಿಸಿಕೊಂಡಿತ್ತು.
ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿ ಹಾಗೂ ಗ್ರಾಮಲೆಕ್ಕಾಧಿಕಾರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಇಪ್ಪತ್ತು ಮಾವಿನ ಮರಗಳು, ಇಪ್ಪತ್ತು ತೆಂಗಿನ ಮರ ಸಂಪೂರ್ಣ ಸುಟ್ಟಿದ್ದು ಹಾಗೂ 170 ದ್ರಾಕ್ಷಿ ಗಿಡಗಳು ಬೆಂಕಿಯಿಂದ ಹಾನಿಗೀಡಾಗಿದೆ ಎಂದು ರೈತ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು.
‘ವಿದ್ಯುತ್ ಅವಘಡದಿಂದಾಗಿ ರೈತರ ಬೆಳೆಯ ಹಾನಿ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ತಿಕೋಟಾ ಕೆಇಬಿ ಶಾಖಾಧಿಕಾರಿಗಳು ಎಸ್.ಎ.ಅವಟಿ ತಿಳಿಸಿದ್ದಾರೆ.
ತಿಕೋಟಾ ತಾಲ್ಲೂಕಿನ ಸಿದ್ದಾಪುರ ಕೆ. ಗ್ರಾಮದಲ್ಲಿನ ಆನಂದ ಸಣ್ಣತಮ್ಮಪ್ಪ ವಿಜಾಪೂರ ಅವರ ತೋಟದಲ್ಲಿನ ಕಬ್ಬು ವಿದ್ಯುತ್ ಅವಘಡದಿಂದ ಬೆಂಕಿಗಾಹುತಿಯಾಗಿರುವದು.