ವಿಜಯಪುರ: ನಗರದ ಬಬಲೇಶ್ವರ ರಸ್ತೆಯಲ್ಲಿರುವ ‘ಸಾಯಿ ಪ್ರಭಾತ್‘ ಬಾರ್ ಮಾಲೀಕನ ಲ್ಯಾಬ್ರಡಾರ್ ನಾಯಿಯನ್ನು ಕದ್ದು ಪರಾರಿಯಾಗಿದ್ದ ಕುಡುಕನನ್ನು ಬಾರ್ನ ಸಿಬ್ಬಂದಿ ಪತ್ತೆ ಹಚ್ಚಿ, ಅದೇ ನಾಯಿ ಬೋನ್ (ಪಂಜರ)ನಲ್ಲಿ ಕೂಡಿ ಹಾಕಿ ಶಿಕ್ಷಿಸಿರುವ ಘಟನೆ ನಡೆದಿದೆ.
ವಿಜಯಪುರ ನಗರದ ನಿವಾಸಿ ಸೋಮು ಎಂಬಾತ ಇತ್ತೀಚೆಗೆ ಬಾರ್ಗೆ ಬಂದು ಕಂಠಪೂರ್ತಿ ಕುಡಿದು ಮನೆಗೆ ಮರಳುವಾಗ ಬಾರ್ ಮುಂದಿನ ಬೋನ್ನಲ್ಲಿ ಇದ್ದ ನಾಯಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ.
ನಾಯಿ ಕಳವುದಾಗಿದ್ದರಿಂದ ಬೇಸರಗೊಂಡಿದ್ದ ಬಾರ್ನ ಮಾಲೀಕನ ಕುಟುಂಬದವರು ಹಾಗೂ ಬಾರ್ ಸಿಬ್ಬಂದಿ ಕೊನೆಗೂ ನಾಯಿ ಕಳ್ಳನನ್ನು ಪತ್ತೆ ಹಂಚಿ, ನಾಯಿ ಸಹಿತಿ ಹಿಡಿದುಕೊಂಡು ಬಂದು, ಅದೇ ನಾಯಿ ಬೋನ್ನಲ್ಲಿ ಮಂಗಳವಾರ ಗಂಟೆಗಟ್ಟಲೆ ಕೂಡಿಹಾಕಿ, ಹಿಂಸೆ ನೀಡಿದ್ದಾರೆ.
ಬಾರ್ಗೆ ಬಂದಿದ್ದ ಇತರೆ ಗ್ರಾಹಕರು ಈ ದೃಶ್ಯ ಕಂಡು, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಗ್ರಾಹಕರ ಸಲಹೆ ಮೇರೆಗೆ ಬೋನ್ನಲ್ಲಿದ್ದ ಸೋಮುನನ್ನು ಹೊರಗೆ ಬಿಟ್ಟಿದ್ದಾರೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.
ಕಾನೂನು ಕ್ರಮ:
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ‘ಪ್ರಕರಣ ಗಮನಕ್ಕೆ ಬಂದಿರಲಿಲ್ಲ. ಈ ಕುರಿತು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.