ದೇವರಹಿಪ್ಪರಗಿ: ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ನಿರಂತರ ಕ್ರೀಡಾಕೂಟಗಳ ಸಂಘಟನೆಗೆ ಸ್ಥಳೀಯರ ಸಹಕಾರವೇ ಮುಖ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ ಹೇಳಿದರು.
ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಬಾಲಕರ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ನಡೆದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕ ವಲಯ ಅಂತರ ಕಾಲೇಜುಗಳ ಮಹಿಳೆಯರ ಕಬಡ್ಡಿ ಟೂರ್ನಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರ ಸತತ ಪರಿಶ್ರಮ ಹಾಗೂ ಸ್ಥಳೀಯರ ಸಹಕಾರದ ಕಾರಣದಿಂದ ಒಂದೇ ವರ್ಷದ ಅವಧಿಯಲ್ಲಿ ಅಂತರ ಕಾಲೇಜು ಕ್ರಿಕೆಟ್ ಟೂರ್ನಿ ಹಾಗೂ ಅಥ್ಲೆಟಿಕ್ ಕೂಟವನ್ನು ಯಶಸ್ವಿಯಾಗಿ ಹಮ್ಮಿಕೊಂಡು ಈಗ ಕಬಡ್ಡಿ ಟೂರ್ನಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಬಸವನ ಬಾಗೇವಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಬಿ. ಹೊಸಮನಿ, ಬೊಳೆಗಾಂವ ಕಾಲೇಜಿನ ಪ್ರಾಂಶುಪಾಲ ಎಸ್.ಎ. ಪತಂಗೆ ಮಾತನಾಡಿದರು.
ತಹಶೀಲ್ದಾರ್ ಪ್ರಕಾಶ ಸಿಂದಗಿ ಮೊಹರೆ ಹಣಮಂತರಾಯ ವೃತ್ತದಿಂದ ಆರಂಭಗೊಂಡ ಪಥಸಂಚಲನಕ್ಕೆ ಚಾಲನೆ ನೀಡಿದರು. ಪಥಸಂಚಲನದಲ್ಲಿ 15 ಕಾಲೇಜುಗಳ ಕಬಡ್ಡಿ ಆಟಗಾರ್ತಿಯರು ಪಾಲ್ಗೊಂಡಿದ್ದರು. ನಂತರ ಪಂದ್ಯಾವಳಿಯ ಆರಂಭದಲ್ಲಿ ಮೈದಾನಕ್ಕೆ ಪೂಜೆ ಸಲ್ಲಿಸಿ ನಂತರ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ವಿಧ್ಯುಕ್ತವಾಗಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ದೈಹಿಕ ಶಿಕ್ಷಣ ನಿರ್ದೇಶಕ ಅಶೋಕಕುಮಾರ ಜಾಧವ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಕಾಲೇಜು ಪ್ರಾಂಶುಪಾಲರಾದ ಅಮೀತ ಮಿರ್ಜಿ, ಎನ್.ಎಸ್. ಝಳಕಿ, ರಾಜಮಾನೆ, ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ ಮಸಬಿನಾಳ, ಶಾಂತಯ್ಯ ಜಡಿಮಠ, ಸುಮಂಗಲಾ ಸೇಬೆನವರ, ಉಮೇಶ ರೂಗಿ, ಕಾಶೀನಾಥ ಬಜಂತ್ರಿ, ಸಿಂಧೂರ ಡಾಲೇರ, ಅಧಿಕ್ಷಕ ಜಗನ್ನಾಥ ಸಜ್ಜನ, ಪ್ರಕಾಶ ಮಲ್ಲಾರಿ, ಕಾಶೀನಾಥ ತಳಕೇರಿ, ರಾಜು ಕಾಖಂಡಕಿ, ರಾಘವೇಂದ್ರ ಗುಡಿಮನಿ, ಪಿ.ಸಿ.ತಳಕೇರಿ, ಸುಭಾಸ್ ಜಾಧವ, ಫಯಾಜ್ ಕಲಾದಗಿ, ಉಪನ್ಯಾಸಕರುಗಳಾದ ದ್ರಾಕ್ಷಾಯಣಮ್ಮ, ಪ್ರೇಮಕುಮಾರಿ, ಎಸ್.ಬಿ.ಜಾಲವಾದಿ, ಅಕ್ರಮ್ ಪಾಷಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.