ಯಾದಗಿರಿ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಎಲ್ಲಾ ಕನ್ನಡದ ಮನಸ್ಸುಗಳನ್ನು ಸಂಘಟನಾತ್ಮಕವಾಗಿ ತೆಗೆದುಕೊಂಡು ಹೋಗಬೇಕು ಎಂದು ಕ್ರೈಸ್ತ ಸಮಾಜದ ಮುಖಂಡ ವಿಜಯರತ್ನ ಅವರು ಸಿದ್ದಪ್ಪ ಹೊಟ್ಟಿ ಅವರಿಗೆ ಕಿವಿಮಾತು ಹೇಳಿದರು.
ನಗರದ ಹೊಸಳ್ಳಿ ಕ್ರಾಸ್ ಹತ್ತಿರದಲ್ಲಿರುವ ತಾತಾ ಸೀಮೆಂಡ್ಸ್ ಮೆಮೋರಿಯಲ್ ಮೆಥೋಡಿಸ್ಟ್ ಚರ್ಚ್ನಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ 3ನೇ ಬಾರಿಗೆ ಆಯ್ಕೆಯಾದ ಸಿದ್ದಪ್ಪ ಹೊಟ್ಟಿಯವರನ್ನು ಸನ್ಮಾನಿಸಿ ಮಾತನಾಡಿದರು.
ಕನ್ನಡಿಗರ ಸೌರ್ವಭೌಮ ಸಂಸ್ಥೆಯಾದ ಪರಿಷತ್ತು ಜಾತಿ, ಮಥಗಳನ್ನು ಮೀರಿ ನಿಂತಿದೆ. ಅಂಥ ಪರಿಷತ್ಅಧ್ಯಕ್ಷರಾಗಿ ಹೊಟ್ಟಿ ಅವರು ಪುಟ್ಟ ಜಿಲ್ಲೆಯಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕಿರಿಜಿಲ್ಲೆಯ ಗೌರವವನ್ನು ಹೆಚ್ಚಿಸಬೇಕೆಂದು ಹೇಳಿದರು.
ಕ್ರೈಸ್ತ ಸಮಾಜದಲ್ಲಿ ಸಾಹಿತ್ಯಕ ಕೃಷಿ ಮಾಡುತ್ತಿರುವವರು ಅನೇಕರಿದ್ದಾರೆ. ಪರಿಷತ್ತು ಅಂಥವರನ್ನು ಗುರುತಿಸಿ ಸೂಕ್ತ ಅವಕಾಶಗಳನ್ನು ನೀಡಿ ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸುವ ಕೆಲಸ ಮಾಡಬೇಕು ಎಂದು ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ತಾವು ಮಾಡಿರುವ ಸತ್ಕಾರ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮುಂಬರುವ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಾಹಿತ್ಯಿಕ ವಾತಾವರಣವನ್ನು ನಿರ್ಮಾಣ ಮಾಡುವುದಾಗಿ ಹೇಳಿದರು.
ಪರಿಷತ್ತಿನ ಚಟುವಟಿಕೆಗಳಲ್ಲಿ ಎಲ್ಲರನ್ನು ಸಮಾನವಾಗಿ ತೆಗೆದುಕೊಂಡು ಹೋಗುವುದರ ಮೂಲಕ ಪರಿಷತ್ತಿನ ಘನತೆ ಗೌರವವನ್ನು ಎತ್ತಿ ಹಿಡಿಯುವುದಾಗಿ ಭರವಸೆ ನೀಡಿದರು.
ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ಸಮಾಜದ ಮುಖಂಡರಾದ ಸಾಂಸನ್ ಜೆ, ರಾಜು ಮೈಗೂರ್, ಸುರೇಶ ಸೈಲೇಶ, ಬಿ.ಕೆ.ಆನಂದ, ಸುನಾಥರಡ್ಡಿ, ನಾಗರಾಜ ಬಿರನೂರ, ಶಾಂತರಾಜ ರಡ್ಡಿ, ಚಂದ್ರಕಾಂತ, ಶರಣಪ್ಪ, ಚಿಮ್ಮು, ಮೇಘನಾಥ ಬೆಳ್ಳಿ, ಸುಂದರರಾಜ್, ಲಾರನ್ಸ್ ಇದ್ದರು.