ಶಹಾಪುರ: ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆ ಅಧಿಕವಾಗುತ್ತಲಿದೆ. ಅದರ ಜೊತೆಯಲ್ಲಿ ರಸ್ತೆ ಅಪಘಾತಗಳು ಏರುಮುಖವಾಗಿವೆ. ಇವೆಲ್ಲವುಗಳಿಗೆ ಪರಿಹಾರವೆಂದರೆ ರಸ್ತೆ ಸುರಕ್ಷತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುರಪುರ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಪೊಲೀಸ್ ಇಲಾಖೆ ಹಾಗೂ ಶಹಾಪುರ ಠಾಣೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಚಾರ ನಿಯಮದ ಜೊತೆಯಲ್ಲಿ ಕಡ್ಡಾಯವಾಗಿ ವಾಹನದ ವಿಮೆ ಹೊಂದಿರಬೇಕು. ವಾಹನದ ಚಾಲನಾ ಪರವಾನಗಿ ಅಗತ್ಯವಾಗಿದೆ. ಅದರಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ₹10 ಸಾವಿರ ದಂಡ ವಿಧಿಸಲಾಗುತ್ತದೆ. ವಾಹನ ಚಲಾಯಿಸುವಾಗ ಮೊಬೈಲ್ ಚಲಾವಣೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಚೆನ್ನಾರಡ್ಡಿ ಪಾಟೀಲ ತಂಗಡಗಿ, ಪೊಲೀಸ್ ಇನ್ಸ್ಪೆಕ್ಟರ್ ಚೆನ್ನಯ್ಯ ಹಿರೇಮಠ, ಆನಂದ ಜೋಷಿ, ಸೂರ್ಯಕಾಂತ ಡಾ.ನಾಗಪ್ಪ ಚೌವಳಕರ್, ಡಾ.ಸಂಘರ್ಷ, ಡಾ.ಬಸಂತ ಸಾಗರ, ಮಹೇಶ ಪತ್ತಾರ ಇದ್ದರು.