ಯಾದಗಿರಿ: ‘ಆಶಾ ಕಾರ್ಯಕರ್ತೆಯರು ನ್ಯಾಯಯುತ ಬೇಡಿಕೆಗಳು ಈಡೇರಿಸುವಂತೆ ಕೋರಿ, ಹಲವು ಭಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆಯುತ್ತಿಲ್ಲ. ಇಂತಹ ಹಠಮಾರಿ ಧೋರಣೆಯನ್ನು ಸರ್ಕಾರ ಬಿಡಬೇಕು‘ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷೆ ಡಿ.ಉಮಾದೇವಿ ಹೇಳಿದರು.
ನಗರದ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಮಂಗಳವಾರ ಆಶಾ ಕಾರ್ಯಕರ್ತೆಯರು ಮಾನವ ಸರಪಳಿ ರಚಿಸುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ವೇಳೆ ಅವರು ಮಾತನಾಡಿದರು.
ಜು.10 ರಿಂದ ನಮ್ಮ ಹೋರಾಟವು ತೀವ್ರಗೊಂಡಿದ್ದು ಈಗಾಗಲೇ ಆಶಾ ಕಾರ್ಯಕರ್ತೆಯರು ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಜರುಗಬೇಕಿದ್ದ ಆರೋಗ್ಯ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆದರೂ, ಸರ್ಕಾರ ತನ್ನ ಹಠಮಾರಿತನ ಬಿಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.
‘ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹ 12,000 ಗೌರವಧನ ಹೆಚ್ಚಿಸಬೇಕು. ಕೋವಿಡ್ ಸಂಬಂಧ ಸಂಪೂರ್ಣ ಸುರಕ್ಷತಾ ಪರಿಕರಗಳನ್ನು ವಿತರಿಸಬೇಕು. ಆಶಾ ಕಾರ್ಯಕರ್ತೆಯರ ಸಮಸ್ಯೆ ಆಲಿಸಲು ಆಗಾಗ ಸಭೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಲಲಿತಾ, ರೇಣುಕಾ, ಯಶೋಧಾ, ಮಹಾಲಕ್ಷ್ಮಿ, ಸಿದ್ದಮ್ಮ, ಚಂದಮ್ಮ, ಸುನಿತಾ, ಶಾರದಾ, ಸಂಗಮ್ಮ ಇದ್ದರು.