ಯಾದಗಿರಿ: ಪ್ರತಿಯೊಂದು ಬ್ಯಾಂಕು ಗ್ರಾಹಕರಿಂದ ಅವಲಂಬಿತವಾಗಿದೆ. ಗ್ರಾಹಕರು ಸಾಲ ಪಡೆದ ಹಣವನ್ನು ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಅದನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಬ್ಯಾಂಕಿಗೆ ಹೆಚ್ಚಿನ ಲಾಭ ಬರುತ್ತದೆ ಮತ್ತು ಗ್ರಾಹಕರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಜಯಕುಮಾರ ಹೇಳಿದರು.
ನಗರದ ಕೆನರಾ ಬ್ಯಾಂಕ್ ಸ್ಟೇಷನ್ ಶಾಖೆಯಲ್ಲಿ ಹಮ್ಮಿಕೊಂಡಿದ್ದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಡೆದ ಸಾಲವನ್ನು ಗ್ರಾಹಕರು ಸಕಾಲದಲ್ಲಿ ಮರು ಪಾವತಿಸಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮನೆ ಕಟ್ಟಲು ಎಂಟು ಜನರಿಗೆ ₹1.62 ಕೋಟಿ, ವಾಹನ ಖರೀದಿಗೆ ಇಬ್ಬರಿಗೆ ₹21 ಲಕ್ಷ, ಶೈಕ್ಷಣಿಕ ಸಾಲ ಐದು ಜನರಿಗೆ ₹30 ಲಕ್ಷ, ವೈಯಕ್ತಿಕ ಸಾಲ ಮೂವರಿಗೆ ₹26 ಲಕ್ಷ, ನಾಲ್ಕು ಸ್ವಸಹಾಯ ಗುಂಪುಗಳಿಗೆ ₹30 ಲಕ್ಷ, ಎನ್ಎಲ್ಎಂ ಯೋಜನೆಯಲ್ಲಿ ಒಂದು ಗುಂಪಿಗೆ ₹40 ಲಕ್ಷ ಒಟ್ಟು ಕೆನರಾ ಬ್ಯಾಂಕ್ ಸ್ಟೇಷನ್ ಶಾಖೆಯಿಂದ ₹2.39 ಕೋಟಿ ಸಾಲ ವಿತರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಯಚೂರಿನ ಕೆನರಾ ಬ್ಯಾಂಕ್ ಪ್ರಾದೇಶಿಕ ಶಾಖೆಯ ಮಾಧವಿ, ಶಾಖಾಧಿಕಾರಿಗಳಾದ ಅಲೋಕ ತಿರ್ಕೆ, ಬಿ.ವಿ.ರಾವ್, ಸುಚಿತ್ರಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.