ಕೊಂಡಾಪುರ (ಸೈದಾಪುರ): ಬಸವಣ್ಣನವರು ಕ್ರಾಂತಿಕಾರಕ ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಿದ ವಿಶ್ವಗುರು ಎಂದು ಮುಖಂಡ ಭೀಮಣ್ಣ ವಡವಟ್ ತಿಳಿಸಿದರು.
ಸಮೀಪದ ಕೊಂಡಾಪುರ ಗ್ರಾಮದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಪ್ರಗತಿ ಕೇಂದ್ರದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಣ್ಣ ಜಗತ್ತು ಕಂಡ ಅಪರೂಪದ ಕಾಯಕಯೋಗಿ. ತಮ್ಮ ವಚನಗಳಿಂದಲೇ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು. ಸ್ತ್ರೀ ಸಮಾನತೆಗಾಗಿ ಮಹತ್ವ ಕೊಟ್ಟರು. ಅನುಭವ ಮಂಟಪವನ್ನು ನಿರ್ಮಿಸಿ ಇಲ್ಲಿ ಎಲ್ಲಾ ಸಾಮಾಜಿಕ, ಆರ್ಥಿಕ ಹಿನ್ನಲೆಯ ಪುರುಷ-ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚೆ ಮಾಡಲು ಅವಕಾಶ ಕಲ್ಪಿಸಿದರು ಎಂದರು.
ಇವನಾರವ ಇವನಾರವ ಎನ್ನದೇ ಎಲ್ಲರೂ ನಮ್ಮವರೇ ಎನ್ನುವ ಮೂಲಕ ಸಮಾನತೆಯ ಮಂತ್ರ ಪಠಿಸಿದರು. ಯುವಕರು ಬಸವಣ್ಣನವರು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಪ್ಪದೇ ಪಾಲಿಸಬೇಕು. ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.
ಭದ್ರಪ್ಪ ಬಾಗ್ಲಿ, ನಾಗೇಶ ತೆಲಗು, ಮಹೇಶ ವಡವಟ್, ಪ್ರಗತಿ ಕೇಂದ್ರದ ನಿರ್ವಾಹಕಿ ಶಿವಾಲೀಲಾ ದೇವು ಹಾಗೂ ವಿದ್ಯಾರ್ಥಿಗಳು ಇದ್ದರು.