ಯಾದಗಿರಿ: ವಿಜಯಪುರ ಗಡಿ ಭಾಗದ ತಾಳಿಕೋಟೆ- ಸುರಪುರ ತಾಲ್ಲೂಕಿನ ಅಮಲಿಹಾಳ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಈಚೆಗೆ ಅಕ್ರಮವಾಗಿ 15.30 ಲೀಟರ್ ಮದ್ಯ ಸಾಗಿಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಮದ್ಯವನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಜಪ್ತಿ ಮಾಡಿದ್ದಾರೆ.
ಕಲಬುರ್ಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಎಸ್.ಕೆ. ಕುಮಾರ್ ನಿರ್ದೇಶನದನ್ವಯ ಹಾಗೂ ಯಾದಗಿರಿ ಜಿಲ್ಲೆ ಅಬಕಾರಿ ಉಪ ಆಯುಕ್ತೆ ಶಶಿಕಲಾ ಒಡೆಯರ್ ಆದೇಶದನ್ವಯ ಶಹಾಪುರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಆರೋಪಿಯು ಘಟನಾ ಸ್ಥಳದಿಂದ ಪರಾರಿಯಾಗಿರುತ್ತಾನೆ. ಸುರಪುರ ವಲಯ ಅಬಕಾರಿ ನಿರೀಕ್ಷಕರು ಮದ್ಯವನ್ನು ಜಪ್ತಿ ಮಾಡಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಕೇದಾರನಾಥ ಎಸ್.ಟಿ., ಶ್ರೀಶೈಲ್ ಒಡೆಯರ್, ಅಬಕಾರಿ ಉಪ ನಿರೀಕ್ಷಕ ಶಬ್ಬೀರ್, ಸೋಮಪ್ಪ, ಸಿಬ್ಬಂದಿ ಲಾಲಸಾಬ್, ಸಂದೀಪ್, ಮಹ್ಮದ್ ರಫಿ, ರಮೇಶ್, ಮರೆಪ್ಪ ಭಾಗವಹಿಸಿದ್ದರು.
600 ಲೀಟರ್ ಸ್ಯಾನಿಟೈಸರ್ ವಿತರಣೆ
ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಜಿಲ್ಲಾಡಳಿತವು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಿಗೆ ಸಹಕಾರಿಯಾಗುವಂತೆ ಅಬಕಾರಿ ಇಲಾಖೆ ವತಿಯಿಂದ ಆರೋಗ್ಯ ಇಲಾಖೆಗೆ 500 ಲೀಟರ್ ಆಲ್ಕೋಹಾಲ್ ಬೇಸಡ್ ಸ್ಯಾನಿಟೈಸರ್ ವಿತರಣೆ ಮಾಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್. ಪಾಟೀಲ ಸ್ಯಾನಿಟೈಸರ್ ಸ್ವೀಕರಿಸಿದರು.
ಅದೇ ರೀತಿ ಜಿಲ್ಲಾ ಕಾರಾಗೃಹ ಮುಖ್ಯ ಅಧೀಕ್ಷಕ ಶಹಾಬುದ್ದೀನ್ ಅವರಿಗೆ 100 ಲೀಟರ್ ಆಲ್ಕೋಹಾಲ್ ಬೇಸಡ್ ಸ್ಯಾನಿಟೈಸರ್ ಹಸ್ತಾಂತರ ಮಾಡಲಾಯಿತು. ಅಬಕಾರಿ ಆಯುಕ್ತರ ನಿರ್ದೇಶನಾನುಸಾರ ಕುಂಬಳಗೋಡಿನ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ನಿಂದ ಪಡೆದ ಒಟ್ಟು 600 ಲೀಟರ್ ಸ್ಯಾನಿಟೈಸರ್ ಅನ್ನು ಹಸ್ತಾಂತರಿಸಲಾಗಿದೆ.
ಅಬಕಾರಿ ನಿರೀಕ್ಷಕ ಕೇದಾರನಾಥ, ಶ್ರೀಶೈಲ ಒಡೆಯರ್, ಅಬಕಾರಿ ಉಪ ನಿರೀಕ್ಷಕ ಶಬ್ಬೀರ್, ಸೋಮಪ್ಪ, ಸಿಬ್ಬಂದಿ ಲಾಲಸಾಬ್, ಸಂದೀಪ್, ಮಹ್ಮದ್ ರಫಿ, ರಮೇಶ್, ಮರೆಪ್ಪ ಇದ್ದರು.