ಯಾದಗಿರಿ: ಸುರಪುರ ತಾಲ್ಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ ನೀರು ಎತ್ತಿ ಹಾಕಿದ ಪ್ರಕರಣ ಸಂಬಂಧ ಹೋಟೆಲ್ ಮಾಲೀಕ ಗಫೂರ್ ಸಾಬ್ ಮತ್ತು ಇತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಲಿತ ಸಮುದಾಯದ ವ್ಯಕ್ತಿಗೆ ಅಸ್ಪೃಶ್ಯತೆ ಆಚರಣೆ ಮಾಡಿದ ಗಫೂರ್ ಸಾಬ್ ಮತ್ತು ಅದಕ್ಕೆ ಸಹಕರಿಸಿದ ಸುಭಾಷ್ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಎಸ್ ಸಿ/ಎಸ್ ಟಿಪಿಎ (ಅಟ್ರಾಸಿಟಿ) ಸೆಕ್ಷನ್ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಈಚೆಗೆ ಮೇಲಿನಿಂದ ವ್ಯಕ್ತಿಯೊಬ್ಬರಿಗೆ ಬೊಗಸೆಯಲ್ಲಿ ನೀರು ಹಾಕಿ ಕೆಳಗಡೆ ಕೂಡಿಸಿ ಉಪಾಹಾರ ನೀಡಿ, ಹೋಟೆಲ್ನಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಎಸ್ಪಿ ಭೇಟಿ: ಶನಿವಾರ ಗ್ರಾಮಕ್ಕೆ ತೆರಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ‘ಅಸ್ಪೃಶ್ಯತೆ ಆಚರಿಸದಂತೆ ಎಚ್ಚರಿಕೆ’ ನೀಡಿದ್ದಾರೆ.
ಜತೆಗೆ ದೇವಸ್ಥಾನದ ಅರ್ಚಕರು ಮತ್ತು ಹೋಟೆಲ್ ಮಾಲೀಕರ ಸಭೆ ನಡೆಸಿ, ಅಸ್ಪೃಶ್ಯತೆ ಆಚರಣೆ ಮಾಡದಂತೆ ಸೂಚಿಸಿದರು.
'ಪ್ರಜಾವಾಣಿ'ಯಲ್ಲಿ 2021ರ ಡಿ.31ರಂದು ‘ನೀರು ಎತ್ತಿಹಾಕುವ ವಿಡಿಯೊ ವೈರಲ್’ ಎನ್ನುವ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಕನ್ನೆಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಅಸ್ಪೃಶ್ಯತೆ ಆಚರಿಸಿದಂತೆ ತಾಕೀತು ಮಾಡಿದ್ದಾರೆ.